Nov 13, 2013

ಸರಿ-ತಪ್ಪು....???



      ಫೋನ್ ರಿಂಗಾಗುತ್ತಿತ್ತು.... ಮುಖ್ಯಮಂತ್ರಿಗಳ ಖಾಸಗಿ ನಂಬರಿನಿಂದ ಬರುತ್ತಿತ್ತು ಕಾಲ್.... ಸಾಹೇಬರು ಸ್ನಾನಕ್ಕೆ ಹೋಗಿದ್ದರಿಂದ ನಾನೇ ಉತ್ತರಿಸಿದೆ..." ನಮಸ್ಕಾರ ಸರ್, ನಾನು ಸಾಹೇಬರ ಪಿ.ಎ. ಮಾತಾಡ್ತಾ ಇರೋದು... ಸಾಹೇಬರು ಸ್ನಾನಕ್ಕೆ ಹೋಗಿದ್ದಾರೆ... ಇಗೋ, ಬಂದರು ಸಾರ್ ಈಗ... ಈಗಲೇ ಕೊಟ್ಟೆ.... " ಎಂದು ಫೋನ್ ಬಾಯಿಗೆ ಕೈ ಅಡ್ಡ ಇಟ್ಟು " ಸಿ.ಎಮ್. ಸಾಹೇಬ್ರ ಫೋನ್ " ಎಂದು ನಮ್ಮ ಸಾಹೇಬರಿಗೆ ಕೊಟ್ಟೆ... ಅವರು ಶಾಂತವಾಗಿಯೇ ಫೋನ್ ತೆಗೆದುಕೊಂಡು ಒಳಗೆ ಹೋದರು... ಈಗಷ್ಟೇ ಸ್ನಾನವಾಗಿದ್ದ ಕಾರಣ ನಮ್ಮ ಸಾಹೇಬರು ಪ್ರಶಾಂತವಾಗಿ ಕಾಣುತ್ತಿದ್ದರು... ನಾನು ಅವರ ಬಳಿ ಸುಮಾರು ಮೂರು ವರ್ಷದಿಂದ ಕೆಲ್ಸ ಮಾಡ್ತಾ ಇದ್ದೇನೆ... ಅವರು ನಗರಾಭಿವ್ರದ್ಧಿ ಸಚಿವರಾಗಿದ್ದರಿಂದಲೂ ನಾನೇ ಅವರ ಪಿ.ಎ.....

        ನಗರವನ್ನಷ್ಟೆ ಅಭಿವ್ರದ್ಧಿ ಮಾಡಿದರೇ ಹೊರತು ಅವರ ಅಭಿವ್ರದ್ಧಿಯೂ ಆಗಲಿಲ್ಲ, ನನ್ನ ಅಭಿವ್ರದ್ಧಿಯೂ ಆಗಲಿಲ್ಲ... ಅವರ ಪ್ರಾಮಾಣಿಕತೆ ರಾಜ್ಯಕ್ಕೇ ಮಾದರಿಯಾಗಿತ್ತು....  "ತಗೊಳ್ಳಿ ಫೋನ್... ಒಬ್ಬರು ಎಮ್.ಎಲ್.ಎ. ಬರ್ತಾರೆ... ಅವರಿಗೇನೋ ಜಿಲ್ಲಾಧಿಕಾರಿಯಿಂದ ಸಮಸ್ಯೆ ಇದೆಯಂತೆ... ಅದರ ಬಗ್ಗೆ ವರದಿ ತರಿಸಿಕೊಳ್ಳಿ... ಮುಖ್ಯಮಂತ್ರಿಗಳೇ ವಶೀಲಿ ಮಾಡ್ತಾ ಇದ್ದಾರೆ ಅಂದರೆ ನಿಜ ಇರಬಹುದು.... ಅರ್ಧ ಘಂಟೆಯಲ್ಲಿ ಬರ್ತಾರೆ ಅವರು... ಅಷ್ಟರಲ್ಲಿ ವರದಿ ತರಿಸಿಕೊಳ್ಳಿ..." ಎಂದವರೇ ಒಳಗೆ ಹೋಗಲು ರೆಡಿಯಾದರು... ನಾನು ಅಳುಕುತ್ತಲೇ " ಸಾರ್.." ಎಂದೆ..... ತಿರುಗಿ ನೋಡಿ " ಏನು ಹೇಳಿ ..? " ಕೇಳಿದರು... ನಾನು ಅಳುಕುತ್ತಲೇ " ಹದಿನೈದು ದಿನದ ಹಿಂದೆ ನಿಮ್ಮ ಊರಿನ ವ್ರದ್ದಾಶ್ರಮದವರು ಬಂದಿದ್ದರಲ್ಲಾ... ಅವರಿಗೆ ಐದು ಲಕ್ಷ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದೀರಿ.. " ಎಂದೆ.... " ಒಹ್...ಹೌದಲ್ವಾ..? ಮರೆತಿದ್ದೆ... ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೊಡಲು ಆಗಲ್ಲಾ ಅಂತ ಇದ್ದಾರೆ... ಹೇಗೆ ಅಡ್ಜಸ್ಟ್ ಮಾಡೋದೋ ಗೊತ್ತಾಗ್ತಾ ಇಲ್ಲ... ಆದರೂ ಕೊಡೋಣ... ಯಾರಾದರು ದಾನಿಗಳು ಸಿಗ್ತಾರಾ ನೋಡೋಣ.... ಹೇಗಾದರು ಮಾಡಿ ಕೋಡಲೇ ಬೇಕು.... ನೆನಪಿಸಿ ಒಳ್ಳೆ ಕೆಲ್ಸ ಮಾಡಿದ್ರಿ " ಎನ್ನುತ್ತಲೇ ಒಳಗೆ ಹೋದರು...

    ನನಗೆ ಮನಸ್ಸು ಹಗುರವಾಯಿತು... ಆ ದಿನ ವ್ರದ್ಧಾಶ್ರಮದ ಮುಖ್ಯರು ಬಂದಿದ್ದಾಗ ನಮ್ಮ ಸಾಹೇಬರು ಅದು ಹೇಗೆ ವಾಗ್ದಾನ ಮಾಡಿದರೋ ತಿಳಿಯದು.... ಯಾರಿಂದಲೂ ಲಂಚ ಮುಟ್ಟದ ಇವರು ಇಷ್ಟೊಂದು ಹಣ ಎಲ್ಲಿಂದ ಹೊಂದಿಸುತ್ತಾರೆ ಎನ್ನುವುದು ನನ್ನ ಅಚ್ಚರಿಯಾಗಿತ್ತು.... ಒಮ್ಮೆ ಗಣಿ ಧಣಿಗಳ ಟೌನ್ ಶಿಪ್ ವಿಚಾರದಲ್ಲಿ ಇಲಾಖಾ ಮಂಜೂರಾತಿಗಾಗಿ ಒಂದು ಕೋಟಿ ಕೊಡಲು ಬಂದಿದ್ದರು... ಹಣದೊಂದಿಗೆ ಬಂದಿದ್ದ ಅವರನ್ನು ನಮ್ಮ ಸಾಹೇಬರು ಸಾಗಹಾಕಿದ್ದರು... ಪೂರ್ತಿ ಕಾನೂನು ಪ್ರಕಾರವೇ ಇರುವ ಹಾಗೆ ನೋಡಿಕೊಂಡಿದ್ದರು.... ತಮ್ಮ ಕುಟುಂಬವನ್ನು ಅಧಿಕಾರದ ಹತ್ತಿರವೂ ಸುಳಿಯಲು ಬಿಡುತ್ತಿರಲಿಲ್ಲ.... ಒಮ್ಮೆ ಅವರ ಮಗನ ಬೈಕ್ ನ್ನ ಪೋಲಿಸರು ಹಿಡಿದಿದ್ದಾಗ ಫೈನ್ ಕಳುಹಿಸಿ ಕೊಟ್ಟಿದ್ದರು ನನ್ನ ಕೈಲಿ... 

    ಇದೆಲ್ಲಾ ಯೋಚಿಸುತ್ತಿರುವಾಗಲೇ  ನನಗೆ ಸಾಹೇಬರು ತರಿಸಿಕೊಳ್ಳಲು ಹೇಳಿದ್ದ ವರದಿ ಬಂದಿತ್ತು... ಅದರಲ್ಲಿ ಜಿಲ್ಲಾಧಿಕಾರಿಗಳ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ... ಅವರ ಎಲ್ಲಾ ಕೆಲಸಗಳೂ ಕಾನೂನಿನ ಪ್ರಕಾರ ಸರಿಯಾಗಿಯೇ ಇದ್ದವು... ಆದರೂ ಎಮ್.ಎಲ್.ಎ. ಅವರಿಗೆ ಎನು ಸಮಸ್ಯೆಯೆಂದು ತಿಳಿಯಲಿಲ್ಲ.... ಅಷ್ಟರಲ್ಲೇ ಅವರೇ ಬಂದರು... ಅವರಿಗೆ ಕುಳ್ಳಿರಿಸಿ ಸಾಹೇಬರಿಗೆ ಸುದ್ದಿ ಮುಟ್ಟಿಸಿದೆ.... ಕೂಡಲೇ ಹೊರಬಂದರು ನಮ್ಮ ಸಾಹೇಬರು... ನಾನು ಹೊರ ಹೋಗಲು ತಯಾರಾದೆ... " ಎಲ್ಲಿ ಹೋಗ್ತೀರಾ..? ಇಲ್ಲೇ ಇರಿ ..ಪರ್ವಾಗಿಲ್ಲ...." ಎಂದರು ನಮ್ಮ ಸಾಹೇಬರು... ನಾನು ಅಲ್ಲೇ ಕುಳಿತೆ.... " ಹೇಳಿ, ಹೇಗೆ ನಡಿತಾ ಇದೆ ನಿಮ್ಮ ಕ್ಷೇತ್ರದ ಕಾರ್ಯಗಳು... ಅನುದಾನ ಮಂಜುರಾಗಿದೆ ತಾನೆ..? ಏನಾದರು ತೊಂದರೆ ಇದೆಯಾ..? ನಿಮ್ಮ ಜಿಲ್ಲೆಯ ಉಸ್ತುವಾರಿ ನನ್ನದೇ ಆದ್ದರಿಂದ ಏನೇ ಕಷ್ಟ ಇದ್ದರೂ ನನಗೆ ಹೇಳಿ... " ಕೇಳಿದರು ಮಂತ್ರಿಗಳು... 

     ಎಮ್. ಎಲ್.ಎ. ಸಾಹೇಬರು ಆ ಕಡೆ, ಈ ಕಡೆ ನೋಡುತ್ತಾ ” ತುಂಬಾ ತೊಂದರೆ ಇದೆ ಸರ್, ಮುಖ್ಯ ತೊಂದರೆ ಇರೋದು ನಮ್ಮ ಜಿಲ್ಲಾಧಿಕಾರಿಗಳಿಂದ ... ಅವರನ್ನು ಬದಲಾಯಿಸಿ... " ಎಂದರು.... ನಮ್ಮ ಸಾಹೇಬರು ನನ್ನ ಕಡೆ ನೊಡಿದರು.... ನನಗೆ ಅರ್ಥ ಆಯ್ತು.... ಅವರು ಕೇಳಿದ್ದ ವರದಿಯನ್ನ ಅವರ ಕೈಯಲ್ಲಿಟ್ಟೆ... ಅದರ ಮೇಲೆ ಕಣ್ಣಾಡಿಸಿದರು... " ಹೌದಾ... ಸ್ವಲ್ಪ ವಿವರವಾಗಿ ಹೇಳ್ತೀರಾ... ಏನು ತೊಂದರೆ ಅಂತ..? " ಕೇಳಿದರು ಮಂತ್ರಿಗಳು.... " ಅವರ ಕಿರುಕುಳ ತುಂಬಾ ಇದೆ ಸರ್, ಭೂಮಿ ಪರಿವರ್ತನೆ ಮಾಡೋದರಲ್ಲಿ, ಕಟ್ಟಡ ಪರವಾನಗೆ ಕೊಡೋದೇ ಇಲ್ಲಾ ಸಾರ್... ನಾವು ಆಡಳಿತ ಪಕ್ಷದವರಲ್ವಾ ಸರ್, ನಮ್ಮ ಕಾರ್ಯಕರ್ತರಿಗೆ ಕೆಲಸ ಮಾಡಿಕೊಡದೇ ಇದ್ರೆ ಮತ್ತೆ ನಮಗೆ ಓಟು ಹಾಕ್ತಾರಾ ಸಾರ್...? ಚಿಕ್ಕ ಪುಟ್ಟ ಗಲಾಟೆಯಾದರೂ ನಮ್ಮ ಜನರನ್ನ ಜೈಲಿಗೆ ಹಾಕಲು ಹೇಳ್ತಾರೆ.. ಗೂಂಡಾ ಕಾಯ್ದೆ ಹೇರಲು ಹೇಳ್ತಾರಂತೆ.... ಮರಳು ಉದ್ದಿಮೆದಾರರಂತೂ ಕಂಗಾಲಾಗಿ ಹೋಗಿದ್ದಾರೆ... ವಾಹನಗಳಿಗೆ ಜಿ.ಪಿ.ಎಸ್ ಹಾಕಬೇಕಂತೆ... ಇಲ್ಲದಿದ್ದರೆ ಸೀಜ್ ಮಾಡ್ತಾರಂತೆ... ಮರಳು ಉದ್ದಿಮೆಯವರು ಪಕ್ಕದ ರಾಜ್ಯಕ್ಕೆ ಮರಳು ಮಾರೋ ಹಾಗಿಲ್ಲವಂತೆ... ಅವರಿಂದಲೇ ನಮ್ಮ ಪಕ್ಷಕ್ಕೆ ಕೋಟಿಗಟ್ಟಲೆ ಫಂಡ್ ಸಿಗೋದು ಸರ್... ಅವರಿಗೇ ತೊಂದರೆ ಕೊಟ್ಟರೆ ಉಳಿಗಾಲ ಇದೆಯಾ ಸರ್..? " ಒಂದೇ ಉಸಿರಿಗೆ ಎಲ್ಲಾ ಹೇಳಿದರು ಎಮ್.ಎಲ್.ಎ.... 

   ಟೇಬಲ್ ಮೇಲೆ ಇಟ್ಟಿದ್ದ ನೀರನ್ನು ಕುಡಿದ ನಮ್ಮ ಸಾಹೇಬರು, " ಓಹ್...ಹೌದಾ... ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕೆ ನನ್ನ ಗಮನಕ್ಕೆ ಬಂದಿಲ್ಲ ಇನ್ನೂ... ಬಿಡಿ.. ನಾನು ಮಾತಾಡುತ್ತೇನೆ ಅವರಲ್ಲಿ...ಎಲ್ಲಾ ಸರಿಯಾಗತ್ತೆ.... ನೀವೇನು ಚಿಂತೆ ಮಾಡಬೇಡಿ.... ನಿಮ್ಮ ಪಕ್ಕದ ಕ್ಷೇತ್ರದ ಚುನಾವಣೆಯ ಮೇಲೆ ಗಮನ ಹರಿಸಿ.... ನಾನೆಲ್ಲಾ ಸರಿ ಮಾಡ್ತೇನೆ.." ಎಂದರು.... ಎಮ್. ಎಲ್.ಎ. ಸಾಹೇಬರು ಇನ್ನೂ ಹತ್ತಿರ ಬಂದು " ಸರ್, ಹಾಗೆನ್ನಬೇಡಿ, ಅವರನ್ನ ಬದಲಾಯಿಸಿ... ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ... ನಮ್ಮದೇ ಜನ ನನ್ನನ್ನು ಕೆಳಗಿಳಿಸುತ್ತಾರೆ.... ಸರ್, ಮರಳು ಉದ್ದಿಮೆದಾರರೆಲ್ಲಾ ಸೇರಿ ಐದು ಲಕ್ಷ ಕೊಟ್ಟಿದ್ದಾರೆ... ಅದನ್ನ ತೆಗೆದುಕೊಳ್ಳಿ... ಜಿಲ್ಲಾಧಿಕಾರಿಗಳ ಬದಲಾವಣೆ ಮಾಡಿ... ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ ಸರ್... ಅವರ ಸಮಸ್ಯೆ ನಾನು ಬಗೆಹರಿಸದಿದ್ದರೆ ಅವರು ನಮ್ಮ ಪಕ್ಷಕ್ಕೆ ಸಪೋರ್ಟ್ ಮಾಡಲ್ಲ ಸರ್... " ಎನ್ನುತ್ತಾ ಕೈ ಮುಗಿದರು.... ನಮ್ಮ ಸಾಹೇಬರಿಗೆ ಅಯೋಮಯ ಪರಿಸ್ಥಿತಿ.... 

   ತಮ್ಮದೇ ಪಕ್ಷದ ಶಾಸಕರನ್ನು ಖುಶಿಯಿಂದ ಇಡುವುದು ಸರಕಾರದ ಮತ್ತು ಮಂತ್ರಿಗಳ ಕರ್ತವ್ಯವಾಗಿತ್ತು....  ಇವರನ್ನು ಖುಶಿ ಇಡದೇ ಹೋದರೆ ಭಿನ್ನಮತೀಯ ಚಟುವಟಿಕೆ ಮಾಡುತ್ತಾರೆ... ವಿರೋಧಪಕ್ಷದವರ ಜೊತೆ ರೆಸೊರ್ಟ್ ರಾಜಕೀಯ ಮಾಡುತ್ತಾರೆ... ಒಂದು ಸರಕಾರವನ್ನೇ ಬುಡಮೇಲು ಮಾಡುತ್ತಾರೆ... ಇವರ ಸಮಸ್ಯೆ ಸರಿ ಮಾಡದಿದ್ದರೆ ಎಲ್ಲರಿಗೂ ಸಮಸ್ಯೆ ತಂದಿಡುತ್ತಾರೆ..... ನಮ್ಮ ಸಾಹೇಬರು ಈ ಎಮ್.ಎಲ್.ಎ.ಸಾಹೇಬರ ಕೆಲಸ ಮಾಡಿಕೊಟ್ಟು ಕೈ ತೊಳೆದುಕೊಂಡರೆ ಒಳ್ಳೆಯದಿತ್ತು ಅಂತ ನನಗನಿಸುತ್ತಿತ್ತು... ಆದರೆ ನಮ್ಮ ಸಾಹೇಬರು ಏನು ಯೋಚಿಸುತ್ತಾರೆ ಅನ್ನೋದು ಮುಖ್ಯವಾಗಿತ್ತು... " ಓ.ಕೆ. ನಿಮ್ಮ ಕೆಲಸ ಆಗತ್ತೆ.... ಒಂದು ಸಾರಿ ಮುಖ್ಯ ಮಂತ್ರಿಗಳ ಹತ್ತಿರ ಮಾತಾಡಿ ನಿಮ್ಮ ಕೆಲ್ಸ ಮಾಡ್ತೇನೆ, ನಿಮ್ಮನ್ನೆಲ್ಲಾ ಜೊತೆ ಕರೆದುಕೊಂಡು ಹೋಗಬೇಕಾಗತ್ತೆ.. ನೀವಿದ್ದರೆ ನಾವೆಲ್ಲಾ ಮಂತ್ರಿಗಳಾಗೋದು...ಒಂದು ನಿಮಿಷ ಇಲ್ಲೇ ಇರಿ..ಈಗ್ಲೇ ಮುಖ್ಯ ಮಂತ್ರಿಗಳ ಜೊತೆ ಮಾತಾಡಿ ಬರುತ್ತೇನೆ " ಎಂದವರೇ ನನ್ನ ಕೈಲಿದ್ದ ಫೋನ್ ತೆಗೆದುಕೊಂಡು ಒಳಗೆ ಹೋದರು...

     " ಸರಿ , ನೀವಿನ್ನು ಹೊರಡಿ... ನಾಳೇನೆ ಜಿಲ್ಲಾಧಿಕಾರಿ ವರ್ಗ ಆಗತ್ತೆ ಬಿಡಿ... "... ನನ್ನತ್ತ ತಿರುಗಿ.. " ಮುಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ ಹೇಳಿ, ಅವರ ವರ್ಗಾವಣೆ ಬಗ್ಗೆ..." ಎಂದರು... ಎಮ್.ಎಲ್.ಎ ಸಾಹೇಬರ ಮುಖ ಊರಗಲ ಆಯ್ತು... " ಧನ್ಯವಾದ ಸರ್, ನಾನಿನ್ನು ಹೊರಟೆ " ಎಂದವರೇ ಹೊರಡಲು ಅನುವಾದರು.... ಇನ್ನೇನು ಬಾಗಿಲ ಬಳಿ ಹೋಗಿಲ್ಲ ... ಮಂತ್ರಿಗಳು " ಅದೇನು ಎಮ್.ಎಲ್.ಎ. ಸಾಹೇಬ್ರೆ... ಆಡಿದ ಮಾತು ಮರೆತು ಹೋಯ್ತಾ..? ಅದೇ ಐದು ಲಕ್ಷ ಕೊಡ್ತೇನೆ ಅಂದಿದ್ರಲ್ಲಾ...? ಅದನ್ನ ಕಳಿಸಿ ಕೊಡಿ..." ಎಂದರು... ಎಮ್.ಎಲ್.ಎ. ಸಾಹೇಬರು ನಗು ನಗುತ್ತಾ " ಈಗಲೇ ಕಳಿಸುತ್ತೇನೆ.. ಕಾರಿನಲ್ಲಿದೆ ಸರ್.." ಎನ್ನುತ್ತಾ ಹೊರ ಹೋದರು....ನನಗೆ ಶಾಕ್... ಎಂದೂ ಹಣಕ್ಕಾಗಿ ಏನೂ ಮಾಡದ ನಮ್ಮ ಸಾಹೇಬರು ಹಣಕ್ಕಾಗಿ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿಯನ್ನು ವರ್ಗ ಮಾಡಿದರಾ..? ಹಣದ ಮುಂದೆ ತಮ್ಮ ಪಕ್ಷದ ಭವಿಷ್ಯ, ತಮ್ಮ ಭವಿಷ್ಯದ ಸಲುವಾಗಿ ತಮ್ಮತನವನ್ನೇ ಮಾರಿಕೊಂಡರಾ...? ಉತ್ತರವಿರದ ತುಂಬಾ ಪ್ರಶ್ನೆಗಳಿದ್ದವು... 

    ಎಮ್.ಎಲ್.ಎ ಸಾಹೇಬರ ಡ್ರೈವರ್ ಸೂಟ್ ಕೇಸ್ ನೊಂದಿಗೆ ಒಳಗೆ ಬಂದ... ಮಂತ್ರಿ ಸಾಹೇಬರ ಟೇಬಲ್ ಹತ್ತಿರ ಇಟ್ಟು ಹೊರಟು ಹೋದ ಆತ... ನನ್ನತ್ತ ತಿರುಗಿದ ಮಂತ್ರಿಗಳು " ಏನ್ ಹಾಗೆ ನೋಡ್ತಾ ಇದೀರಾ...? ಇವರ್ಯಾಕೆ ಹಣ ತೆಗೆದುಕೊಂಡರು ಅಂತಾನಾ...? ನೋಡಿ, ನಾನು ಇವರ ಕೆಲಸ ಮಾಡದೇ ಇದ್ದರೆ , ಮುಖ್ಯ ಮಂತ್ರಿಗಳ ಹತ್ತಿರ ಹೋಗ್ತಾರೆ.. ಇನ್ನೂ ಹೆಚ್ಚಿನ ಹಣ ಕೊಟ್ಟು ಅವರ ಕೆಲ್ಸ ಮಾಡಿಸಿಕೊಳ್ಳುತ್ತಾರೆ... ಹಣ ಮುಖ್ಯ ಅಲ್ಲ ಇಲ್ಲಿ... ಅವರ ಕೆಲಸ ಮಾಡದೇ ಇದ್ರೆ , ನಮ್ಮನ್ನೆಲ್ಲಾ ಸಪೋರ್ಟ್ ಮಾಡೊದಿಲ್ಲ... ಅಧಿಕಾರ ಇಲ್ಲದೇ ಜನರ ಕೆಲಸ ಮಾಡೋದು ಕಷ್ಟ ...ಇಷ್ಟಕ್ಕು ನಾವು ಜಿಲ್ಲಾಧಿಕಾರಿ ಬದಲು ಮಾಡುತ್ತಿದ್ದೇವೋ ಹೊರತು ಕಾನೂನಿನ ವಿರುದ್ಧ ನಡೆಯಿರಿ ಅಂತ ಜಿಲ್ಲಾಧಿಕಾರಿಗೆ ಹೇಳಿಲ್ಲವಲ್ಲ... ಇನ್ನೊಂದು ವಿಷ್ಯ ಈ ಹಣವನ್ನು ಆ ವ್ರದ್ಧಾಶ್ರಮಕ್ಕೆ ಕೊಟ್ಟು ಬಿಡಿ... ಅವರಿಗೆ ಕೊಡಬೇಕು ಅಂತಾನೆ ನಾನು ಇವರಿಂದ ಹಣ ಪಡೆದದ್ದು...ಅದೂ ಅಲ್ಲದೆ ನಾವೇನು ಅವರ ಹತ್ತಿರ ಹಣ ಡಿಮಾಂಡ್ ಮಾಡಿಲ್ಲವಲ್ಲ...? ಹಾವೂ ಸಾಯದೇ ಕೋಲೂ ಮುರಿಯದೇ ಕೆಲ್ಸ ಆಯಿತಲ್ಲ... ಅದೇ ಮುಖ್ಯ.... " ಎಂದರು.... ನನಗೆ ಹಿಡಿಸಲಿಲ್ಲ.... " ಸರ್, ಇದು ಪಾಪದ ಹಣ ಸರ್... " ಎಂದೆ ಅಳುಕುತ್ತಲೆ... " ನೋಡಿ, ಪಾಪದ ಹಣ, ಪುಣ್ಯದ ಹಣ ಅಂತ ಇರಲ್ಲ... ಹಣ ಎಲ್ಲರಿಗೂ ಒಂದೇ.... ಆದ್ರೆ ನಾವು ಅದನ್ನ ಹೇಗೆ ಉಪಯೋಗಿಸುತ್ತೀವಿ ಅನ್ನೋದರ ಮೇಲೆ ಇರತ್ತೆ ಅಷ್ಟೆ... ಬೇಗನೇ ಹಣ ಕಳಿಸಿ ಕೊಡಿ ಅವರಿಗೆ... " ಎಂದರು ಮಂತ್ರಿಗಳು...

    ನಾನು ಸೂಟ್ ಕೇಸ್ ತೆಗೆದುಕೊಂಡೆ... ಫೋನ್ ಬಡಿದುಕೊಳ್ಳತೊಡಗಿತು... ದಿಲ್ಲಿಯ ನಂಬರಾಗಿತ್ತು ಅದು... ನಾನೇ ಉತ್ತರಿಸಿದೆ... ಪಕ್ಷದ ಹೈ ಕಮಾಂಡ್ ಮಾತನಾಡುತ್ತಿದ್ದರು... ನಾನು ಫೋನ್ ಮಂತ್ರಿಗಳ ಕೈಗಿಟ್ಟೆ... ಅವರು ಏನೂ ಮಾತನಾಡುತ್ತಿರಲಿಲ್ಲ... ಬರೀ ಹೂಂ... ಹೂಂ...ಎನ್ನುತ್ತಿದ್ದರು... ಎರಡು ನಿಮಿಷ ಮಾತನಾಡಿ ಫೋನಿಟ್ಟರು... “" ದಿಲ್ಲಿಯಿಂದ ಫೋನ್... ಚುನಾವಣೆ ಚರ್ಚಿಗಾಗಿ ಹಣ ಕಳಿಸಬೇಕಂತೆ... ಆ ಸೂಟ್ ಕೇಸ್ನಲ್ಲಿದ್ದ ಹಣ ಅಧ್ಯಕ್ಷರಿಗೆ ಕಳಿಸಿ.... ಪ್ರತೀ ಮಂತ್ರಿಗಳಿಂದ ಹಣ ಕೇಳ್ತಾ ಇದ್ದಾರೆ.... ಕಳಿಸಿ ಬಿಡಿ ಇದನ್ನ... " ಎಂದು ಬೇಸರ ಪಡುತ್ತಲೇ ಹೇಳಿದರು... " ಸರ್, ಆ ವ್ರದ್ಧಾಶ್ರಮದವರಿಗೆ ಏನು ಹೇಳಲಿ...? " ಅಳುಕುತ್ತಲೇ ಕೇಳಿದೆ.... " ನೋಡೋಣ.. ಸ್ವಲ್ಪ ಸಮಯ ಕೇಳಿ ಅವರ ಹತ್ತಿರ... " ಎಂದು ಒಳಗೆ ಹೋದರು... ನಾನು ವ್ರದ್ಧಾಶಮಕ್ಕೆ ಫೋನ್ ಮಾಡಲು ತಯಾರಾದೆ... 

   ಕೂಡಲೇ ಹೊರ ಬಂದ ಮಂತ್ರಿಗಳು...  " ಅವರಿಗೆ ಹೇಳಿ... ಎರಡು ತಿಂಗಳು ಬಿಟ್ಟು ಬರಲಿಕ್ಕೆ ಹೇಳಿ... ಐದು ಲಕ್ಷದ ಬದಲು ಹತ್ತು ಲಕ್ಷ ಕೊಡುತ್ತೇವೆ ಅಂತ..." ನಾನು ಅವಾಕ್ಕಾದೆ... ಐದು ಲಕ್ಷ ಕೊಡಲೇ ಆಕಾಶ ಭೂಮಿ ಒಂದು  ಮಾಡ್ತಾ ಇದ್ದೇವೆ... ಹತ್ತು ಲಕ್ಷ ಕೊಡೋದು ಹೇಗೆ ಅಂತ...? ಇವರಿಗೇನಾದರೂ ತಲೆ ಕೆಟ್ಟಿದೆಯಾ..? ಅನಿಸಿತು... ಫೋನ್ ಕಟ್ ಮಾಡಿದೆ.... " ಸರ್, ಹೇಗೆ... ಎಲ್ಲಿಂದ ತರ್ತೀರಾ ಸರ್.. ಸುಮ್ಮನೆ ಯಾಕೆ ಇಲ್ಲದ ತಲೆಬಿಸಿ... ಅವರಿಗೆ ಹೇಳಿಬಿಡೋಣ... ಹಣ ಕೊಡಲು ಆಗಲ್ಲ ಅಂತ.. " ಎಂದೆ ತಲೆ ತುರಿಸಿಕೊಳ್ಳುತ್ತಾ.... " ಇಲ್ಲ..ಇಲ್ಲ... ಅವರಿಗೆ ಕೊಡೋಣ.. ಹತ್ತು ಲಕ್ಷ..." ಎಂದರು ಧೈರ್ಯದಿಂದ... " ಸರ್, ಎಲ್ಲಿಂದ ತರ್ತೀರಾ ಅಷ್ಟೊಂದು ಹಣ..?" ಕೇಳಿಯೇಬಿಟ್ಟೆ..... " ಒಂದ್ ಕೆಲ್ಸ ಮಾಡಿ, ಆ ಎಮ್.ಎಲ್.ಎ. ಜಿಲ್ಲಾಧಿಕಾರಿಯನ್ನು ಬದಲು ಮಾಡಲು ಹೇಳಿದ್ದಾರಲ್ಲ... ಬದಲಿ ಮಾಡಿ, ಆದರೆ ಅಲ್ಲಿಗೆ ರಾಜ್ಯದ ತುಂಬಾ ಪ್ರಾಮಾಣಿಕ ಮತ್ತು ಕಠಿಣ ಜಿಲ್ಲಾಧಿಕಾರಿಯನ್ನು ಹಾಕಿ.... ಮುಂದಿನ ತಿಂಗಳು ಅವರನ್ನೂ ಬದಲು ಮಾಡಲು ಕೇಳಿಕೊಂಡು ಬರ್ತಾರೆ ಮತ್ತೆ ಇದೇ ಎಮ್.ಎಲ್.ಎ... ಆವಾಗ ಅವರಿಂದ ಹತ್ತು ಲಕ್ಷ ಪಡೆದರಾಯಿತು......ಅಲ್ಲಿಯ ತನಕವಾದರೂ ಕಾನೂನಿನ ಪ್ರಕಾರ ಕೆಲಸ ನಡೆಯಲಿ.... "ಎಂದರು ನಗು ನಗುತ್ತಲೇ.....

ನನಗೂ ನಗು ಬಂತು... ಇವರು ಪ್ರಾಮಾಣಿಕರಾ...? ಅಥವಾ ಅಪ್ರಾಮಾಣಿಕರಾ ..? ತಿಳಿಯಲಿಲ್ಲ....

Nov 7, 2013

ಶಿರಸಾ ನಮನ....

    ‘ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ’ ಎನ್ನುತ್ತಲೇ ಶುರು ಮಾಡಿದ ನನ್ನ ಬ್ಲಾಗ್ ’ಮೂಕ ಮನದ ಮಾತು’ನಲ್ಲಿ ಕವನ, ಲಘು ಬರಹ, ಕಥೆಗಳನ್ನು ಬರೆದೆ... ಹೀಗೆ ಬರೆಯಲು ಶುರು ಮಾಡಿದಾಗ ನನ್ನ ಕಥೆಗಳಿಗೆ ಮಾತ್ರ ತುಂಬಾ ಪ್ರೋತ್ಸಾಹ ಸಿಗುತ್ತಿತ್ತು... ಮನಸ್ಸಿನಲ್ಲಿ ಕಾಡುತ್ತಿದ್ದ ತುಂಬಾ ವಿಷಯಗಳಿಗೆ ಸುಣ್ಣ ಬಣ್ಣ ಬಳಿದು, ಮಸಾಲೆ ಹಚ್ಚಿ ಬರೆಯುತ್ತಿದ್ದೆ... ಕಥೆಯ ಪಾತ್ರ ನಾನಾಗಿ ಬರೆಯುತ್ತಿದ್ದೆ... ’ ಎದುರಿಗೆ ಕುಳಿತು ಕಥೆ ಹೇಳಿದ ಹಾಗೆ ಇರಬೇಕು, ಕಥೆ ಬರೆಯೋ ಶೈಲಿ ’ ಎನ್ನೋದು ನನ್ನ ಅಭಿಪ್ರಾಯವಾಗಿತ್ತು.... ಹಾಗೆ ಬರೆಯಲು ಪ್ರಯತ್ನಿಸಿದೆ ಕೂಡ.. ಎಷ್ಟು ಯಶಸ್ವಿಯಾಗಿದ್ದೇನೋ ನೀವೇ ಹೇಳಬೇಕು...

      ಈ ಸಂಕಲನ ಬರಲು ಕಾರಣರಾದವರನ್ನು ಈ ಸಮಯದಲ್ಲಿ ನೆನೆಯಲೇ ಬೇಕಾಗಿದೆ...
ಬ್ಲಾಗ್ ಬರೆಯಲು ಶುರು ಮಾಡಲು ಕಾರಣನಾದ ಗೆಳೆಯ ವಿನಯ್ ಭಟ್, ನನ್ನೆಲ್ಲಾ ಕೆಲಸಗಳಿಗೂ,ನೋವಿಗೂ, ನಲಿವಿಗೂ ಜೊತೆ ನಿಲ್ಲುವ ಆತ್ಮೀಯ ಸ್ನೇಹಿತ ವೆಂಕಟೇಶ್ ಮೊಗೇರ, ದಿನವೂ ನೆನಪಾಗುವ, ಅವನ ಅನುಪಸ್ಥಿತಿ ಕಾಡುವ ಹಾಗೆ ಮಾಡುವ ಗೆಳೆಯ ದಿ. ನಾಗರಾಜ್ ಮೊಗೇರ....  ಕಥೆಯಲ್ಲಿ ಇರಬೇಕಾದ ಮಸಾಲೆ, ಕೊನೆಯಲ್ಲಿ ಕೊಡಬಹುದಾದ ತಿರುವುಗಳ ಬಗ್ಗೆ ತಿಳಿಸುವ , ತಿದ್ದುವ ’ಇಟ್ಟಿಗೆ ಸಿಮೆಂಟು ಸೆಂಟಿಮೆಂಟು’ ಬ್ಲಾಗಿನ ಪ್ರಕಾಶಣ್ಣ ... ಅತ್ತಿಗೆ ಆಶಾ ಪ್ರಕಾಶ್,  ಕವರ್ ಪೇಜ್ ಗೆ ಅತ್ಯುತ್ತಮ ಫೋಟೋ ಕಳಿಸಿಕೊಟ್ಟವರು ಇವರೇ...... ನನ್ನ ಕಥೆಯ, ನನ್ನ ಜೀವನದ ತಪ್ಪುಗಳನ್ನು ಹುಡುಕಿ ಸರಿ ಮಾಡುವ ಮಡದಿ ವನಿತಾ... ನನ್ನ ಎಲ್ಲಾ ಕಥೆಗಳಿಗೆ ಉತ್ತಮ ಪ್ರೊತ್ಸಾಹ ಕೊಡುವ, ತಿದ್ದುವ ಸುನಾಥ್ ಕಾಕಾ ಅವರ ಪುಸ್ತಕದ ಜೊತೆ ನನ್ನ ಪುಸ್ತಕ ಬಿಡುಗಡೆ ಆಗಿದೆ.... ಹೂವಿನ ನಾರೂ ಸ್ವರ್ಗಕ್ಕೆ ಹೋದ ಅನುಭವ ನನ್ನದಾಗಿದೆ.... ಸುನಾಥ್ ಕಾಕಾ ಧನ್ಯವಾದ..., ’ಕೊಳಲು’ ಖ್ಯಾತಿಯ ಡಾಕ್ಟರ್ ಮೂರ್ತಿ ಸರ್, ಮೈಸೂರಿನ ’ನಮ್ಮೊಳಗೊಬ್ಬ’ ಬಾಲಸುಬ್ರಮಣ್ಯ ಸರ್, ಕುವೈತ್ ನ ವಿಜ್ನಾನಿ ’ ಜಲನಯನ’ ಆಜಾದ್ ಸರ್, ಮುಂಬೈ ಅಶೋಕ್ ಶೆಟ್ಟರು,   ಉಮೇಶ್ ದೇಸಾಯಿ ಸರ್, ಸೀತಾರಾಂ ಸರ್ . ತುಂಬಾ ಜನ ಸ್ನೇಹಿತರ ಹೆಸರು ಮರೆತಿದ್ದೇನೆ... ದಯವಿಟ್ಟು ಕ್ಷಮಿಸಿ... ತಪ್ಪು ಮಾಡಿದಾಗ ತಿದ್ದಿ, ಮಾಡದೇ ಇದ್ದಾಗ ತಪ್ಪು ತಿಳಿದು ಹೋದ ಗೆಳೆಯರಿಗೂ ತುಂಬು ಮನದ ಧನ್ಯವಾದಗಳು...

      ಬ್ಲಾಗ್ ಲೋಕದ ಅತ್ಯುತ್ತಮ ಕವಿ ಬದರಿನಾಥ ಪಲವಳ್ಳಿಯವರು ನನ್ನ ಬೆನ್ನು ತಟ್ಟಿದ್ದಾರೆ... ನನ್ನ ಕಥೆಗಳಿಗೆ ಸೂಕ್ಷ್ಮತೆ ಯನ್ನು ಹೇಳಿದ್ದಾರೆ.. ಅವರಿಗೂ ಧನ್ಯವಾದ.... ಹಾಗೆಯೇ ನನ್ನ ಪುಸ್ತಕ ಮಾಡುವುದಾರೆ ಅದಕ್ಕೆ ನೀವೇ ಕವರ್ ಪೇಜ್ ಮಾಡಬೇಕು ಎಂದಾಗ ಖುಶಿಯಿಂದ ಒಪ್ಪಿದ ’ಮ್ರದು ಮನಸು’ ಸುಗುಣ ಮೇಡಮ್, ’ ಸವಿಗನಸು’ ಮಹೇಶ್ ಸರ್...  ಸುಗುಣ ಅವರಿಂದ ಪರಿಚಿತರಾಗಿ ಪುಸ್ತಕದ ಕವರ್ ಪೇಜ್ ಮಾಡಿಕೊಟ್ಟ ವೀರೇಶ್ ಹೊಗೆಸೊಪ್ಪಿನವರ್ ಅವರಿಗೆ ತುಂಬಾ ಧನ್ಯವಾದ... ನಾನು ಬರೆದ ಪ್ರತೀ ಕಥೆಯ ನಂತರ ’ನಿಮ್ಮ ಪುಸ್ತಕ ಯಾವಾಗ ಬರತ್ತೆ’ ಎಂದು ಕೇಳಿ ಪ್ರೋತ್ಸಾಹ ನೀಡುವ 3k ಬಳಗದ ರೂಪಾ ಸತೀಶ್... ಮಂಗಳೂರಿನಲ್ಲಿ ಸಾಹಿತ್ಯ ಸೇವೆ ಮಾಡುತ್ತಿರುವ ಅರೆಹೊಳೆ ಪ್ರತಿಷ್ಟಾನದ ಸದಾಶಿವ ರಾಯರು.... ನನ್ನ ಎಲ್ಲಾ ಕಥೆಗಳನ್ನು ಪುಸ್ತಕ ಯೋಗ್ಯವಾ ಅಂತ ಓದಿ ಅವರ ಟಿಪ್ಪಣಿ ನೀಡಿದ ಸುರತ್ಕಲ್ ಕಾಲೇಜಿನ ಅಧ್ಯಾಪಕರಾಗಿರುವ ಶ್ರೀ. ರಘು ಇಡ್ಕಿಡು ಸರ್...   ಇವರಿಗೆಲ್ಲಾ ನನ್ನ ಅನಂತ ಧನ್ಯವಾದಗಳು...      

ಒಂದು ಪುಸ್ತಕ ಪ್ರಕಟಗೊಳ್ಳಲು ಬರೆಯುವವ ಎಷ್ಟು ಮುಖ್ಯವೋ, ಪ್ರಕಾಶಕರೂ ಅಷ್ಟೇ ಮುಖ್ಯ... ಹಾಗೆಯೆ ನನ್ನ ಪುಸ್ತಕವನ್ನು ಪ್ರಕಟ ಮಾಡುತ್ತಿರುವ ಪ್ರಕಾಶಕರಾದ ’ಸ್ರಷ್ಟಿ ’ ನಾಗೇಶ್ ಅವರಿಗೆ ಅನಂತ ಧನ್ಯವಾದಗಳು..... ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಅಂತ ಅಳುಕುತ್ತಲೇ ಖ್ಯಾತ ಸಾಹಿತ್ಯಕಾರ, ಕವಿ ಗೋಪಾಲ್ ವಾಜಪೇಯಿ ಯವರನ್ನು ಕೇಳಿಕೊಂಡಿದ್ದೆ... " ಮುನ್ನುಡಿ ಅಂತ ಹೇಳಲ್ಲ... ಒಂದೆರಡು ಕಥೆ ಓದಿ ನನ್ನ ಟಿಪ್ಪಣಿ ಬರೆದುಕೊಡುತ್ತೇನೆ " ಎಂದು ಹೇಳಿ, ನನ್ನ ಎಲ್ಲಾ ಕಥೆಗಳನ್ನೂ ಓದಿ, ತುಂಬಾ ಖುಶಿಯಿಂದ ಅತ್ಯುತ್ತಮ ಮುನ್ನುಡಿ ಬರೆದುಕೊಟ್ಟ ಹಿರಿಯರಾದ ವಾಜಪೇಯಿ ಸರ್ ಗೆ ಅನಂತ ವಂದನೆಗಳು.... ಹಾಗೆಯೇ, ಮೊದಲು ಮುನ್ನುಡಿ ಬರೆಯಲು ಒಪ್ಪಿ, ಕೊನೆಗೆ ನನ್ನ ಕೋರಿಕೆಯ ಮೇಲೆ ಬೆನ್ನುಡಿ ಬರೆದ, ನನ್ನ ಕಥೆಗಳನ್ನು ಓದುತ್ತಾ ಬೆನ್ನು ತಟ್ಟುತ್ತಿದ್ದ ಖ್ಯಾತ ರಂಗಭೂಮಿ ಕಲಾವಿದೆ, ಕಿರುತೆರೆಯ ಮುಕ್ತ ಮುಕ್ತದ ’ ಮಂಗಳತ್ತೆ, ’ ಮಹಾಪರ್ವದ ’ಮಂದಾಕಿನಿ’ ಶ್ರೀಮತಿ. ಜಯಲಕ್ಷ್ಮಿ  ಪಾಟೀಲರಿಗೆ ನನ್ನ ಹಾರ್ಧಿಕ ಧನ್ಯವಾದಗಳು....

ಇದೇ ಸಮಯದಲ್ಲಿ ಹಿತೈಷಿಗಳಾದ ವನಿತಾ, ವಿನೋದ್, ಅತ್ರಾಡಿ ಸುರೇಶ್ ಹೆಗ್ಡೆಯವರು, ನನ್ನ ಕಥೆಗಳನ್ನು ಮೆಚ್ಚುವ ವೆಂಕಟೇಶ್ ಮೂರ್ತಿಯವರು, ಕಥೆಗಳಿಗೆ ಸರಿಯಾದ ವಿಮರ್ಶೆ ನೀಡುವ ಶ್ರೀಕಾಂತ್ ಮಂಜುನಾಥ್,, ತಮ್ಮ ಚುಟುಕುಗಳಿಂದ ಗಮನ ಸೆಳೆಯುತ್ತಿರುವ ನಮ್ಮೂರಿನ ಪರೇಶ್ ಸರಾಫ್, ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಪುಷ್ಪರಾಜ್ ಚೌಟ, ’ ಕಾಲೇಜು ಡೈರಿ’ ಪತ್ರಿಕೆ ನಡೆಸುತ್ತಿರುವ ಗುಬ್ಬಚ್ಚಿ ಸತೀಶ್ ಅವರಿಗೆ ,  ಯಾವಾಗಲೂ ನನ್ನ ಕಥೆ ಓದಿ ತಿದ್ದುವ ಸುಮಾ ಸುಧಾಕಿರಣ್, ವಿಜಯಶ್ರೀ ನಟರಾಜ್,  ದಿಲೀಪ್ ಹೆಗ್ಡೆ, ಪ್ರಗತಿ ಹೆಗ್ಡೆ, ಅತ್ಯುತ್ತಮ ಬರಹಗಳಿಂದ ನಮ್ಮನ್ನು ಮುದಗೊಳಿಸುವ ವಿ.ಆರ್. ಭಟ್ ಸರ್, ಅತ್ಯುತ್ತಮ ಛಾಯಗ್ರಾಹಕ ಮಿತ್ರರಾದ ಕೆ. ಶಿವು, ದಿಗ್ವಾಸ್ ಹೆಗ್ಡೆ,  ಮಲ್ಲಿಕಾರ್ಜುನ್, ಉತ್ತಮ ಕಥೆಗಾರ್ತಿಯರಾದ ಅನಿತಾ ನರೇಶ್ ಮಂಚಿ, ತೇಜಸ್ವಿನಿ ಹೆಗ್ಡೆ, ಪ್ರಭಾಮಣಿ ನಾಗರಾಜ್, ಭಾಗ್ಯ ಭಟ್, ಶಮ್ಮಿ ಸಂಜೀವ್, ಪ್ರವೀಣ್ ಭಟ್ ಸಂಪ, ಶಶಿ ಜೋಯಿಸ್, ಗೌತಮ್ ಹೆಗ್ಡೆ,  ಉದಯೋನ್ಮುಖ ಬರಹಗಾರ್ತಿ ಕುಮಟಾದ ಸೌಮ್ಯ ಭಾಗ್ವತ್, ಸುಶ್ರುತ ದೊಡ್ಡೇರಿ, ದಿವ್ಯ ದೊಡ್ಡೇರಿ, ಸುಷ್ಮ ಮೂಡಬಿದ್ರಿ, ರಷ್ಮಿ ಕಾಸರಗೋಡು,  ತಮ್ಮಂದಿರಾದ ಅನಿಲ್ ಬೆಡಗೆ, ಪ್ರದೀಪ್, ಹಳ್ಳಿ ಹುಡುಗ ನವೀನ್, ಶಿವಪ್ರಸಾದ್, ಗಿರೀಶ್ ಸೋಮಶೇಖರ್, ಪ್ರವೀಣ್ ಗೌಡ, ನಾಗರಾಜ್ ಕೆ, ಚಿನ್ಮಯ್ ಭಟ್, ಸತೀಶ್ ನಾಯ್ಕ್ , ಸುಧೇಶ್ ಶೆಟ್ಟಿ,  ಅರುಣ್ ಶ್ರಂಗೇರಿ, ಉಮೇಶ್ ಬೆಳ್ನಿ, ಪ್ರದೀಪ್ ಬೆಳ್ಕೆ,  ಗುರುಪ್ರಸಾದ್ ಶ್ರಂಗೇರಿ,  ಇವರಿಗೆಲ್ಲಾ ನನ್ನ ತುಂಬು ಮನದ ಧನ್ಯವಾದ...

ಹಿರಿಯರಾದ ತಿರುಮಲೈ ರವಿ, ಶ್ರೀನಿವಾಸ್ ಹೆಬ್ಬಾರ್, ಮಂಜುನಾಥ ಕೊಳ್ಳೆಗಾಲ ಇವರೆಲ್ಲರಿಗೂ ಧನ್ಯವಾದ. ಗೆಳೆಯರಾದ ಶುಭಾ ಮಂಜುನಾಥ್, ರುದ್ರೇಶ್ ಗೌಡ, ತಂಗಿ ಪುಷ್ಪಲತಾ ಮಂಜುನಾಥ್, ಮಂಗಳೂರಿನ ವರದಿಗಾರ ಮಿತ್ರರಾದ ಆರಿಫ್ ಮೊಹಮ್ಮದ್ ಪಡುಬಿದ್ರಿ, ವೇಣು ವಿನೋದ್, ಇವರಿಗೂ ತುಂಬು ಮನದ ಧನ್ಯವಾದಗಳು....


ಕೊನೆಯದಾಗಿ, ನನ್ನೆಲ್ಲಾ ಕಥೆಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಪೂರ್ತಿಯಾದ ವ್ಯಕ್ತಿಗಳಿಗೆ, ಘಟನೆಗಳಿಗೆ ಧನ್ಯವಾದಗಳು....
ಪುಸ್ತಕ ಬಿಡುಗಡೆಗೆ ಬಂದ ತುಂಬಾ ಜನ ಗೆಳೆಯರಿಗೆ ಹಿತೈಷಿಗಳಿಗೆ ತುಂಬುಮನದ ಧನ್ಯವಾದಗಳು...

Sep 8, 2013

ವಿನಾ- ಕಾರಣ...!!!



   ಮನಸ್ಸು ಅಳುಕುತ್ತಾ ಇತ್ತು.... ಎಷ್ಟೇ ಸಮಾಧಾನ ತಂದುಕೊಂಡರೂ ಯಾಕೋ ಹೆದರಿಸುತ್ತಾ ಇತ್ತು.... ಮಾಡುತ್ತಿದ್ದುದು ತಪ್ಪು ಎಂದು ಗೊತ್ತಿದ್ದರೂ ಸಹ, ಬುದ್ದಿ ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.... ಇವತ್ತು ಅವಳ ಉತ್ತರ ಸಿಗುತ್ತಿತ್ತು... ನಿನ್ನೆಯ ಭೇಟಿಯ ನಂತರ ಅವಳ ಉತ್ತರದ ಬಗ್ಗೆ ಅನುಮಾನ ಇರಲಿಲ್ಲವಾದರೂ ಮನಸ್ಸು ಯಾಕೋ ಅಳುಕುತ್ತಾ ಇತ್ತು.... ಕೆಲವೊಮ್ಮೆ ’ ಇದೆಲ್ಲಾ ಬೇಕಿತ್ತಾ ನನಗೆ ’ ಅಂತಾನೂ ಅನಿಸತ್ತೆ....

ಇದು ಶುರು ಆಗಿದ್ದು ಒಂದು ವರ್ಷದ ಹಿಂದೆ...

    ನನ್ನ ಮನೆಯ ಪಕ್ಕದ ಹುಡುಗಿಯೊಂದು ಅಚಾನಕ್ಕಾಗಿ ನನ್ನ ಕಾರಿನಲ್ಲಿ ಲಿಫ಼್ಟ್ ಕೇಳಿದಾಗ... ಆ ಸಂಜೆ ವಿಪರೀತ ಮಳೆ ಬರ್ತಾ ಇತ್ತು... ಆಫೀಸು ಕೆಲಸ ಮುಗಿಸಿ ಹೊರಟವನಿಗೆ ಸಂಜೆ ಆರಾದರೂ ಕತ್ತಲೆಯಾದ ಹಾಗೆ ಕಾಣಿಸಿತ್ತು.... ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕತ್ತಲಾದ ಹಾಗೆ ಕಾಣಿಸುತ್ತಿತ್ತು... ಜನರ ಓಡಾಟವೂ ಕಡಿಮೆ ಇತ್ತು... ಈ ಹುಡುಗಿ ಎದುರಿಗೆ ಬಂದು ಕೈ ತೋರಿಸಿದಳು... ನಾನು ಕಾರು ನಿಲ್ಲಿಸಿದೆ.... ಒಳಗೆ ಕುಳಿತವಳೇ " ಥಾಂಕ್ಯೂ ಸರ್. ಮನೆ ಕಡೆ ಹೋಗುವ ಬಸ್ ನಿಲ್ಲಿಸಿದ್ದಾರೆ.. ತುಂಬಾ ಮಳೆಯಲ್ವಾ ಅದಕ್ಕೆ .. ನಿಮ್ಮನ್ನು ದಿನಾಲೂ ನೋಡುತ್ತೇನೆ... ನಿಮ್ಮ ಮನೆಯ ಪಕ್ಕವೇ ನಮ್ಮ ಮನೆ ಇರುವುದು ಸರ್.." ಎಂದಳು ಆಕೆ... ನಾನು ಈ ಮೊದಲು ಅವಳನ್ನು ಎಲ್ಲಿಯೂ ನೋಡಿರಲಿಲ್ಲ... ನಾನು ಅವಳ ಹೆಸರು ಕೇಳುವ ಮೊದಲೇ ಆಕೆ ಹೇಳಿಕೊಂಡಳು... " ನಿಮ್ಮ ಮಗನನ್ನು ಸ್ಕೂಲಿಗೆ ಬಿಡುವಾಗ ನಾನು ಆಫೀಸಿಗೆ ಹೊರಡೋದು ಸರ್... ನಿಮ್ಮ ಹೆಂಡತಿಯ ಜೊತೆಗೂ ನಾನು ಮಾತನಾಡಿದ್ದೇನೆ ಸರ್... ನಿಮ್ಮನ್ನು ಭೇಟಿ ಆಗ್ತಾ ಇರೋದು ಇದೇ ಮೊದಲು.... "

   ಅರಳು ಹುರಿದಂತೆ ಮಾತನಾಡುತ್ತಾ ಇದ್ದಳು ಆಕೆ... ನಾನು ಅವಳನ್ನು ಗಮನಿಸಿದೆ... ಮಳೆಯಲ್ಲಿ ನೆನೆದಿದ್ದಳು... ಸಾಧಾರಣವೆನಿಸುವ ಚೂಡಿ ದಾರ್ ನಲ್ಲಿದ್ದ ಆಕೆ ಸಾಧಾರಣ ರೂಪದವಳಾಗಿದ್ದಳು... ಸ್ವಲ್ಪ ಕಪ್ಪಗಿದ್ದರೂ ಮುಖದಲ್ಲಿ ಲಕ್ಷಣವಿತ್ತು, ಮುಗ್ಧತೆಯಿತ್ತು.... ಈ ಹುಡುಗಿಯಲ್ಲಿ ಏನೋ ಸೆಳೆತವಿತ್ತು.... ಮದುವೆಯಾಗಿ ಆರು ವರ್ಷವಾಗಿದ್ದರೂ ಹುಡುಗಿಯರ ಗಮನ ಸೆಳೆಯುವ ಮೈಕಟ್ಟು ನನ್ನದಾಗಿತ್ತು... ಇಷ್ಟಪಟ್ಟು ಮದುವೆಯಾದ ಹೆಂಡತಿ, ಮುದ್ದಿನಂಥ ಮಗ ಇದ್ದರೂ ಆಫೀಸಿನ ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದು ಬಿಟ್ಟಿರಲಿಲ್ಲ ನಾನು.... ಆದರೂ ನನ್ನ ಮಿತಿ ಮೀರಿರಲಿಲ್ಲ.... ಹೆಂಡತಿಗೆ ಮೋಸ ಮಾಡಿರಲಿಲ್ಲ... ಮಾಡುವ ಉದ್ದೇಶವೂ ಇರಲಿಲ್ಲ ಎನ್ನಿ... ಅಥವಾ ಮೋಸ ಮಾಡುವ ಅವಕಾಶ ಸಿಕ್ಕಿರಲಿಲ್ಲ ಅಂಥಲೂ ಅನ್ನಬಹುದು....

ಈ ಹುಡುಗಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಾ ಬಂದೆ ನಾನು... ಅವಳ ತಮ್ಮನೊಬ್ಬನಿಗೆ ಕೆಲಸವಿರದೇ ಮನೆಯಲ್ಲೇ ಇದ್ದಾನಂತೆ... ಅಮ್ಮನಿಗೆ ಕಾಯಿಲೆ ಇದೆಯಂತೆ... ಅಪ್ಪನೂ ಮನೆಯಲ್ಲೇ ಇದ್ದಾರಂತೆ , ಏನೂ ಕೆಲ್ಸ ಮಾಡದೆ... ನಾನು ಇವಳ ಹಳೆಯ ಗೆಳೆಯನಂತೆ ಎಲ್ಲವನ್ನೂ ಹೇಳಿಕೊಂಡಳು ಆಕೆ... ಅವಳ ಎಲ್ಲಾ ಮಾತಿಗೂ ಕಿವಿಯಾದ ನನಗೆ ಮನೆ ಬಂದಿದ್ದೇ ತಿಳಿಯಲಿಲ್ಲ.... " ತುಂಬಾ ಥ್ಯಾಂಕ್ಸ್ ಸರ್... ಸಿಗುತ್ತೇನೆ ಇನ್ನೊಮ್ಮೆ " ಎಂದವಳೇ ಕಾರು ನಿಲ್ಲಿಸಿದೊಡನೆಯೇ ಓಡಿ ಹೋದಳು... ಹುಡುಗಿ ತುಂಬಾ ಚೂಟಿ ಎನಿಸಿತು... ಮುದ್ದಾಗಿಯೂ ಕಂಡಳು... ಅವಳ ನಗು ಅಪ್ಯಾಯಮಾನವಾಗಿ ಕಂಡಿತು ನನಗೆ ಈ ಚಳಿಯಲ್ಲಿ.... ಮನೆಯ ಗೇಟ್ ತೆಗೆದು ಹೆಂಡತಿ ಹೊರ ಬರದೇ ಇದ್ದರೆ, ಅಲ್ಲೇ ನಿಂತಿರುತ್ತಿದ್ದೆನೋ ಏನೋ.... ಮನೆಯ ಒಳಗೆ ಬಂದರೂ ಮನಸ್ಸೆಂಬ ಕೆರೆಗೆ ಕಲ್ಲು ಬಿದ್ದಂಗಾಗಿತ್ತು....

ಊಟದ ಶಾಸ್ತ್ರ ಮಾಡಿ ಮುಗಿಸಿದರೂ ಹೆಂಡತಿಯ ಅಡುಗೆ ಮನೆ ಕೆಲಸ ಮುಗಿದಿರಲಿಲ್ಲ... 5 ವರ್ಷ ಬೆನ್ನ ಹಿಂದೆ ಬಿದ್ದು ಪ್ರೀತಿಸಿ ಒಲಿಸಿಕೊಂಡ ಹುಡುಗಿ, ಹೆಂಡತಿಯಾದ ಮೇಲೆ ಪ್ರೀತಿ ಕಡಿಮೆಯಾಯಿತಾ....?? ಇನ್ನೂ ತಿಳಿದಿರಲಿಲ್ಲ... ಮಗುವಾದ ಮೇಲಂತೂ ಅವಳ ಪ್ರಪಂಚವೇ ಬೇರೆಯಾಗಿತ್ತು.... ಮಗ, ಮನೆ, ತವರು ಮನೆ, ಅವಳ ತೋಟದ ಸುತ್ತಲೇ ಅವಳ ಪ್ರಪಂಚ ಸುತ್ತುತ್ತಿತ್ತು... ನನಗೆ ಇದರಿಂದ ಸಮಸ್ಯೆ ಇರದಿದ್ದರೂ ಸಂತೋಷವಂತೂ ಇರಲಿಲ್ಲ... ಇದನ್ನೆಲ್ಲಾ ಯೋಚಿಸುತ್ತಿದ್ದವನಿಗೆ ಯಾವಾಗ ನಿದ್ದೆ ಬಂದಿತ್ತೋ ತಿಳಿಯಲಿಲ್ಲ...

  ಯಾವಾಗಲೂ ಮಗನನ್ನು ಕಳುಹಿಸಲು ಬೈಕ್ ನಲ್ಲಿ ಹೋಗುವ ನಾನು ಆ ದಿನ ಕಾರ್ ಹೊರ ತೆಗೆದೆ... ಆ ಹುಡುಗಿ ಸಿಕ್ಕರೆ ಆಫೀಸಿಗೆ ಡ್ರಾಪ್ ಕೊಡುವಾ ಅಂತಲೂ ಇರಬಹುದು... ನಾನೆನಿಸಿದಂತೆಯೇ ಆ ಹುಡುಗಿ ಸಿಕ್ಕಳು,  ನಾನು ಅವಳಿಗೆ ಡ್ರಾಪ್ ಕೊಟ್ಟೆ ಸಹ..... ದಿನಗಳೆದಂತೆಯೇ ನಾನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸಿದೆ... ಆ ಕ್ಷಣಗಳಲ್ಲಿ ಏನೂ ಕೆಟ್ಟ ಉದ್ದೇಶವಿರದೇ ಇದ್ದರೂ ಅವಕಾಶ ಸಿಕ್ಕರೆ ಬಿಡುವ ಮಹಾನ್ ಬುದ್ದಿಯೂ ಇರಲಿಲ್ಲ.... ಅವಳನ್ನು ಸಮೀಪ ಮಾಡಿಕೊಳ್ಳುವ ಆತುರದಲ್ಲಿ ನಾನು ಮಾಡಿದ ಒಂದು ತಪ್ಪೆಂದರೆ ” ನನ್ನ ಮತ್ತು ನನ್ನ ಹೆಂಡತಿಯ ಮಧ್ಯೆ ಬಿನ್ನಾಭಿಪ್ರಾಯ ಇದೆ, ದಿನಾಲು ಜಗಳ ನಡೆಯುತ್ತದೆ, ಅವಳಿಂದ ನನಗೆ ಏನೂ ಸಂತೋಷ, ಖುಷಿ ಸಿಗ್ತಾ ಇಲ್ಲಾ, ತುಂಬಾ ಅನುಮಾನದ ಪ್ರಾಣಿ ಆಕೆ ” ಅಂತ ಸುಳ್ಳು ಹೇಳಿದ್ದೆ... ಅದನ್ನು ಈ ಹುಡುಗಿ ನಂಬಿದ್ದಳು ಕೂಡ.... ಅಲ್ಲದೇ  ಅವಳು ಇದನ್ನು ನಂಬುವ ಹಾಗೆ ಮಾಡಿದ್ದೆ...

  ದಿನ ಕಳೆದಂತೆ ಇವಳ ಮೇಲೆ ಆಸಕ್ತಿ ಹೆಚ್ಚಾಗುತ್ತಾ ಬಂದಂತೆ ಹೆಂಡತಿಯ ಮೇಲೆ ಪ್ರೀತಿ ಕಡಿಮೆಯಾಗುತ್ತಾ ಬಂತು... ನನ್ನ ಹೆಂಡತಿಗೆ ನನ್ನ ಮೇಲೆ ಇದ್ದ ಅತೀವ ನಂಬಿಕೆಯ ಪರಿಣಾಮವೋ ಅಥವಾ ಅವಳ ಆಧ್ಯತೆ ಬದಲಾದ ಪರಿಣಾಮವೋ ಇದೆಲ್ಲದರ ಬಗ್ಗೆ ಗಮನ ಹರಿಯಲಿಲ್ಲ... ನಾನೂ ಸುಮ್ಮನಿದ್ದೆ.... ಈ ಹುಡುಗಿಯ ಸಾಂಗತ್ಯ ಬಯಸಿದರೂ ನನಗೆ ಹೆಂಡತಿಯನ್ನು ದೂರ ಮಾಡುವ ಉದ್ದೇಶ ಇರಲಿಲ್ಲ.... ಈ ನಡುವೆ ಈ ಹುಡುಗಿ ನನ್ನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿತ್ತು... ನನ್ನಂಥಹ ಉತ್ತಮ ಮನುಷ್ಯನಿಗೆ ಹೆಂಡತಿಯಿಂದ ಮೋಸವಾಗಬಾರದು ಮತ್ತು ನನ್ನ ಜೀವನ ಸುಖಮಯವಾಗಿರಬೇಕು ಎಂಬುದು ಆಕೆಯ ಅಭಿಲಾಶೆಯಾಗಿತ್ತು....

  ಈಗೀಗಂತೂ ನಾನು ಅವಳಿಗಾಗಿಯೇ ಆಫೀಸಿಗೆ ಹೋಗುತ್ತೀನಾ ಅನ್ನುವಷ್ಟು ಹಚ್ಚಿಕೊಂಡು ಬಿಟ್ಟಿದ್ದೆ... ಅವಳಿಗೆ ನನ್ನದೇ ಆಫೀಸಿನಲ್ಲಿ ಕೆಲಸ ಕೊಡಲು ಸಹ ರೆಡಿಯಾಗಿದ್ದೆ...ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ... ಈ ನಡುವೆ ನನ್ನ ಮಗನ ಜೊತೆ ಅವಳ ಗೆಳೆತನವೂ ಆಗಿತ್ತು... ನನ್ನಾಕೆಗೆ ಇದರ ಸುಳಿವೇ ಇರಲಿಲ್ಲ....

   ನಾನು ಪೀಕಲಾಟಕ್ಕೆ ಸಿಕ್ಕಿದ್ದು...  ಒಮ್ಮೆ ಆ ಹುಡುಗಿ ನನ್ನನ್ನು ಮದುವೆಯಾಗಲು ಕೇಳಿಕೊಂಡಿದ್ದಕ್ಕೆ.... ನನ್ನಾಕೆಗೆ ಮೋಸ ಮಾಡಿ ಇವಳನ್ನು ಮದುವೆಯಾಗಲು ನಾನು ರೆಡಿಯಾಗಿದ್ದೆ ಸಹ.... ಮಗನಿಗೆ ರಜೆ ಇದ್ದುದರಿಂದ ನನ್ನಾಕೆಯನ್ನೂ ತವರು ಮನೆಗೆ ಕಳಿಸಿದ್ದೆ.... ಅವಳ ಮದುವೆಯ ಆಹ್ವಾನಕ್ಕೆ ನಾನು ಒಪ್ಪಿಗೆ ಕೊಡಲು ಸ್ವಲ್ಪ ಸಮಯ ಕೇಳಿದ್ದೆ... ನನ್ನ ಹೆಂಡತಿಗೆ ಡೈವೋರ್ಸ್ ಕೊಡಲು ಸಮಯ ಬೇಕು ಅಂತ ಇವಳಿಗೆ ಸುಳ್ಳು ಹೇಳಿದ್ದೆ... ಇವಳ ಮೇಲಿನ ಮೋಹ ನನ್ನನ್ನು ಏನು ಬೇಕಾದರು ಮಾಡಿಸುತ್ತಿತ್ತು...

ಒಂದು ದಿನ ಧೈರ್ಯ ಮಾಡಿ ಹೆಂಡತಿಗೂ ಹೇಳಿ ಬಿಟ್ಟೆ... ನನಗೆ ಅವಳಿಂದ ಡೈವೋರ್ಸ್ ಬೇಕೆಂದು... ನನ್ನ ಮಾತಿನಿಂದ ಅವಳಿಗೆ ತುಂಬಾ ಶಾಕ್ ಆಯಿತು... ಮಗನ ಮುಖವೂ ನೆನಪಿಗೆ ಬರಲಿಲ್ಲ... ನನ್ನಾಕೆ ಮನೆಯವರ ವಿರೋದಕ್ಕೆ ಹೆದರಿ ನಾನು ಅವಳಿಗೆ ಜೀವನಕ್ಕಾಗುವ ಮೊತ್ತ ಕೊಟ್ಟೆ... ಚೆನ್ನಾಗಿಯೇ ದುಡಿದಿದ್ದರಿಂದ ಹಣಕ್ಕೆನೂ ಕೊರತೆ ಇರಲಿಲ್ಲ... ನನ್ನ ಜೀವನದ ದುಡಿತದ ಅರ್ಧ ಪಾಲನ್ನು ಅವಳಿಗೆ ಕೊಟ್ಟಿದ್ದೆ... ಡೈವೋರ್ಸ್ ಅನ್ನೂ ಪಡೆದೆ... ಈ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದ್ದೆ... ಇದನ್ನು ಕೇಳಿಯಂತೂ ಈ ಹುಡುಗಿ ಮುಖ ಊರಗಲವಾಗಿತ್ತು... ಅವಳ ಮನೆಯವರೂ ಒಪ್ಪಿದ್ದರು... ಈ ಹುಡುಗಿಯ ಖುಶಿಗೆ ಪಾರವೇ ಇರಲಿಲ್ಲ... ಆದರೆ ಅವಳಿಗೆ ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೀನಾ ಎನ್ನುವ ಅಪರಾಧಿ ಭಾವ ಕಾಡಲು ಶುರು ಆಗಿತ್ತಂತೆ... ಅವಳಿಗೆ ಸಮಾಧಾನ ಮಾಡಲು ನನಗೆ ಹೆಚ್ಚು ಹೊತ್ತು ಹಿಡಿಯಲಿಲ್ಲವಾದರೂ ಅವಳು ಮದುವೆಗೆ ಸ್ವಲ್ಪ ಸಮಯ ಕೇಳಿ ನನ್ನನ್ನು ಇನ್ನೂ ಹೆಚ್ಚಿನ ಹೆದರಿಕೆಗೆ ದೂಡಿದ್ದಳು...

ನಾನೂ ಸಹ ನನ್ನ ತಳಪಾಯ ಭದ್ರ ಮಾಡಿಕೊಂಡಿದ್ದೆ.... ಅವಳ ಅಮ್ಮನನ್ನು ಬುಟ್ಟಿಗೆ ಹಾಕಿಕೊಂಡಿದ್ದೆ...ಅಂದರೆ ಅವಳ ಅಮ್ಮನಿಗೆ ನನ್ನೆಲ್ಲಾ ಆಸ್ತಿಯ ಪರಿಚಯ ಮಾಡಿಸಿದ್ದೆ ಮತ್ತು  ಮನೆಯಲ್ಲೇ ಇದ್ದ ಮಗನಿಗೆ ದೊಡ್ಡದೊಂದು ಹುದ್ದೆಯ ಆಮಿಷ ತೋರಿಸಿದ್ದೆ.... ಯಾವ ಕಾರಣಕ್ಕೂ ನನ್ನ ಮದುವೆ ಆಗಲು ಒಪ್ಪದಿರಲು ಕಾರಣವೇ ಇರದ ಹಾಗೆ ಮಾಡಿದ್ದೆ.... ನಾನು ಮಾಡಿದ ದೊಡ್ದ ತಪ್ಪೆಂದರೆ ಈ ನಡುವೆ ನನ್ನ ಹೆಂಡತಿಯನ್ನು ಮರೆತಿದ್ದು... ಅವಳ ಬಗ್ಗೆ ನಾನು ಗಮನವೇ ಹರಿಸಿರಲಿಲ್ಲ... ಅವಳ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು... ಈ ಹುಡುಗಿ ತೆಗೆದುಕೊಂಡ ದಿನವೂ ಇವತ್ತೇ ಇತ್ತು....

ಆಫೀಸಿನ ಹತ್ತಿರವೇ ಇದ್ದ ಪಾರ್ಕಿನಲ್ಲಿ ಕಾಯುತ್ತಾ ಕುಳಿತಿದ್ದೆ ಅವಳಿಗಾಗಿ... ಸಿಗರೇಟ್ ಪ್ಯಾಕ್ ಮುಗಿಯುವುದಕ್ಕೂ ಅವಳು ಒಳಗೆ ಬರುವುದಕ್ಕೂ ಸರಿಯಾಯ್ತು....   ಅವಳ ಮುಖದಲ್ಲಿ ನಗುವಿತ್ತು... ನನಗಿಷ್ಟವಾದ ಹಳದಿ ಬಣ್ಣದ ಟಿ ಶರ್ಟ್ ತೊಟ್ಟಿದ್ದಳು... ನನಗೆ ಗೆಲುವೆನಿಸಿತು... ಎಂದೂ ಬಾರದ ಹೆಂಡತಿಯ ನೆನಪಾಯಿತು... ತಲೆ ಕೊಡವಿಕೊಂಡೆ... ಹಿಂದಿನದನ್ನು ಮರೆತು ಮುಂದಿನದರ ಬಗ್ಗೆ ಯೋಚಿಸಿ ಮುನ್ನಡೆಯೋಣ ಎನಿಸಿಕೊಂಡೆ... ನನ್ನ ಪಕ್ಕದಲ್ಲೇ ಕುಳಿತಳು ಆಕೆ... " ಯಾಕೆ ತುಂಬಾ ಟೆನ್ಸನ್ ನಲ್ಲಿದ್ದೀರಾ..? " ಕೇಳಿದಳು... ಇವಳಿಗೇನು ಗೊತ್ತು ನನ್ನ ಪಾಡು....? ಮದುವೆಯ ದಿನ ಗೊತ್ತುಪಡಿಸೋದೊಂದೆ ಬಾಕಿ ಇದ್ದು ಈ ಹುಡುಗಿ ಸತಾಯಿಸುತ್ತಿದ್ದಾಳೆ... " ಇಲ್ಲಪ್ಪಾ... ಆರಾಮಿದ್ದೇನೆ ನಾನು... ಸರಿ.. ಎಲ್ಲವೂ ಕ್ಲೀಯರ್ ಆಯ್ತಾ... ಒಂದು ವಿಷಯ ನೆನಪಿಟ್ಟುಕೊ... ನಿನ್ನ ಮೇಲೆ ನನಗೆ ಮನಸ್ಸಿದ್ದುದೂ ಹೌದು... ಆದರೆ ನೀನೇ ಮೊದಲು ಅದನ್ನು ಹೇಳಿಕೊಂಡೆ... ನನ್ನ ಹೆಂಡತಿಯ ಜೊತೆಯೂ ನನ್ನ ಸಂಬಂಧ ಸರಿ ಇರಲಿಲ್ಲ... ಈಗ ಅದಕ್ಕೆಲ್ಲಾ ಒಂದು ತಾರ್ಕಿಕ ಅಂತ್ಯ ಬಂದಿದೆ... ಅವಳಿಂದ ನನಗೆ ಡೈವೋರ್ಸ್ ಸಹ ಸಿಕ್ಕಿದೆ... ಈಗ ನಿನ್ನ ಮದುವೆಯಾಗಲು ನಾನು ರೆಡಿ ಇದ್ದೇನೆ... ನೀನು ಮದುವೆಯ ಆಹ್ವಾನ ಕೊಟ್ಟ ನಂತರವೇ ಇದೆಲ್ಲಾ ಆಗಿದ್ದು... ಈಗ ಹೇಳು ಮದುವೆ ಯಾವಾಗ ಇಟ್ಟುಕೊಳ್ಳೋಣ..."? ನನ್ನ ಗಡಿಬಿಡಿ ನನಗಾಗಿತ್ತು...

ಆಕೆ ನನ್ನ ಕೈ ತೆಗೆದುಕೊಂಡಳು... " ನಿಮ್ಮದು ಲವ್ ಮ್ಯಾರೇಜ್ ಆಗಿತ್ತಾ ...? "ಕೇಳಿದಳು... " ಹೌದು...ಅದೆಲ್ಲಾ ಯಾಕೀಗ..?  ಅವಳನ್ನು 5 ವರ್ಷ ಬೆನ್ನಿಗೆ ಬಿದ್ದು ಪ್ರೀತಿಸಿ ಮದುವೆಯಾಗಿದ್ದೆ.... ಅದು ಮುಗಿದ ಅಧ್ಯಾಯ ಈಗ... " ಎಂದೆ ನಾನು.... " ನನ್ನನ್ನ ಅಷ್ಟು ಇಷ್ಟ ಪಡ್ತೀರಾ ನೀವು...? ನನ್ನನ್ನ ಯಾಕೆ ಮದುವೆಯಾಗಲು ಮನಸ್ಸು ಮಾಡಿದ್ರೀ ನೀವು...? " ಪ್ರಶ್ನೆ ಕೇಳುವ ಪರಿಗೆ ನಾನು ಮನಸೋತೆ... ಅವಳ ಈ ಪ್ರಶ್ನೆ ನನಗೆ ಕಿರಿಕಿರಿ ಎನಿಸಿದರೂ ಅವಳ ಮೇಲಿನ ಪ್ರೀತಿ ಹೇಳಿಕೊಳ್ಳಬೇಕಿತ್ತು.... " ನೋಡು ಹುಡುಗಿ, ನಿನ್ನ ಮೇಲೆ ನನ್ನ ಪ್ರೀತಿಗಿಂತಲೂ , ನೀನು ನನ್ನ ಮೇಲೆ ತೋರಿಸಿದ ಪ್ರೀತಿಗೆ ಸಾಟಿಯಿಲ್ಲ... ಈ ರೀತಿ ಪ್ರೀತಿಯನ್ನೂ ಯಾರೂ ತೋರಿಸಿರಲಿಲ್ಲ.. ಅದೇ ನನ್ನನ್ನು ಮದುವೆಯಾಗಲು ಪ್ರೆರೇಪಿಸಿತು... ನೀನು ನನ್ನ ಹೆಂಡತಿಗಿಂತಲೂ ತುಂಬಾ ಸುಂದರವಾಗಿದ್ದೀಯಾ... ಅದರ ಬಗ್ಗೆ ಮಾತೇ ಇಲ್ಲ.... ಅದು ಜಗತ್ತನ್ನೇ ಮರೆತು ನಿನ್ನ ಹಿಂದೆ ಸುತ್ತುವ ಹಾಗೆ ಮಾಡಿದೆ... ಅದೆಲ್ಲಾ ಬಿಡು... ಮದುವೆ ಹಾಲ್ ಎಲ್ಲಿ ಬುಕ್ ಮಾಡಲಿ, ಆಮಂತ್ರಣ ಪತ್ರಿಕೆ ರೆಡಿ ಆಗ್ತಾ ಇದೆ... ದಿನಾಂಕ ಪ್ರಿಂಟ್ ಮಾಡೊದೊಂದೇ ಬಾಕಿ..." ಎಂದೆ ಅವಳ ಕೈ ಮೇಲೆ ಹೂ ಮುತ್ತನಿಟ್ಟೆ...

ನನ್ನ ಕೈಗೂ ಒಂದು ಮುತ್ತನಿಟ್ಟ ಆಕೆ ಎದ್ದು ನಿಂತಳು..." ನಿಮ್ಮನ್ನು ನಾನು ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸುತ್ತೇನೆ... ಅದ್ಯಾವ ಮಾಯೆಯಿಂದ ನಾನು ನಿಮ್ಮನ್ನು ಇಷ್ಟು ಪ್ರೀತಿಸಿದೆನೋ ನನಗೇ ತಿಳಿಯದು... ನಿಮ್ಮನ್ನು ಮದುವೆಯಾಗಲು ನನ್ನ ಮನಸ್ಸು ಒಪ್ಪುತ್ತಿಲ್ಲ.... ನನ್ನನ್ನು ಮರೆತುಬಿಡಿ..." ಪಕ್ಕದಲ್ಲೇ ಬಾಂಬ್ ಬಿದ್ದಹಾಗಾಯಿತು.... ಅದುರಿಬಿದ್ದೆ....
ಅವಳ ರಟ್ಟೆ ಹಿಡಿದು ನನ್ನ ಕಡೆ ತಿರುಗಿಸಿದೆ... ಸ್ವಲ್ಪ ರಫ್ ಆಗಿಯೇ ಕೈ ಹಿಡಿದಿದ್ದೆ.... ಅದರ ಬಗ್ಗೆ ಯೋಚಿಸುವ ಪ್ರಜ್ನೆ ಇರಲಿಲ್ಲ... " ಏನ್ ಹೇಳ್ತಾ ಇದ್ದೀಯಾ...? ತಮಾಶೆ ಮಾಡಬೇಡ್ವೇ...? ಪ್ರಾಣಾನೇ ಇಟ್ಕೊಂಡಿದೀನಿ ನಿನ್ನ ಮೇಲೆ... " ಆಲ್ಮೋಸ್ಟ್ ಕೂಗಿದೆ....

    ಅವಳ ಮುಖದಲ್ಲಿ ಏನೂ ಬದಲಾವಣೆ ಏನೂ ಕಾಣಲಿಲ್ಲ... ನನಗೆ ಗಾಬರಿ ಯಾಯಿತು....  ಅವಳು ನಾನು ಬಿಗಿಯಾಗಿ ಹಿಡಿದ  ರಟ್ಟೆಯ ಕಡೆ ನೋಡುತ್ತಿದ್ದಳು... ನೋಯುತ್ತಿತ್ತು ಅನಿಸತ್ತೆ... ಬಿಟ್ಟು ಬಿಟ್ಟೆ.... " ಸಾರಿ ಹುಡುಗಿ, ಆವೇಶ ಕ್ಕೊಳಗಾದೆ... ಒಂದ್ ವಿಷಯ ಅರ್ಥ ಮಾಡ್ಕೊ... ನಾನು  ನಿನ್ನನ್ನು ಇಷ್ಟ ಪಟ್ಟಿದ್ದು, ನಿನ್ನ ಮೇಲೆ ಪ್ರೀತಿ ತೋರಿಸಿದ್ದು ಯಾವುದೂ ಸುಳ್ಳಲ್ಲ... ಹಾಗೆ ನೀನೂ ಸಹ... ನಿನಗೇನಾದರೂ ನಿನ್ನಿಂದಾಗಿ ನನ್ನ ಹೆಂಡತಿಗೆ ಮೋಸ ಆಯ್ತು ಎನ್ನುವ ಅಪರಾಧಿ ಭಾವನೆ ಇದ್ದರೆ ಬಿಟ್ಟು ಬಿಡು ಅದನ್ನ... ಅವಳಿಗೆ ಎನು ಬೇಕೋ ಅದನ್ನ ಕೊಟ್ಟಿದ್ದೇನೆ... ಮಗನ ಭವಿಷ್ಯಕ್ಕಾಗುವಷ್ಟನ್ನೂ ಕೊಟ್ಟಿದ್ದೇನೆ... ಅವಳ ಭವಿಷ್ಯಕ್ಕೆ ಏನೂ ತೊಂದರೆ ಆಗಲ್ಲ ಬಿಡು... ಅದರ ಬಗ್ಗೆ ಯೋಚನೆ ಮಾಡಬೇಡ..." ನಾನು ಬೇಡುವ ಸ್ಥಿತಿಗೆ ಬಂದಿದ್ದೆ... ನನ್ನ ಬಗ್ಗೆ ನನಗೇ  ಜಿಗುಪ್ಸೆಯಾಯಿತು... ಆದರೆ ಇದೆಲ್ಲಾ ಪ್ರೀತಿ ಒಲಿಸಿಕೊಳ್ಳಲು ಎಂದು ಸಮಾಧಾನಪಡಿಸಿಕೊಂಡೆ....

ಇಷ್ಟೆಲ್ಲಾ ಅಂದರೂ ಆಕೆ ಮುಖಭಾಷೆಯಲ್ಲಿ ಏನೂ ಬದಲಾವಣೆ ಕಾಣಲಿಲ್ಲ... " ನಿಮ್ಮ ಜೊತೆ ಮದುವೆಯಾಗದೇ ಇರಲು ಇವೆಲ್ಲಾ ಕಾರಣಗಳೇ ಅಲ್ಲ... ನನಗೆ ನನ್ನ ಭವಿಷ್ಯವೂ ಮುಖ್ಯ... " ಎಂದಳು ಆಕೆ.... ಸಿಟ್ಟು ಬಂತು ನನಗೆ... " ನಿನಗೇನು ಕಡಿಮೆ ಮಾಡಿದ್ದೇನೆ ನಾನು...? ನಿನ್ನ ತಮ್ಮನಿಗೆ ಉದ್ಯೋಗ ಕೊಡಿಸುತ್ತೇನೆ.... ನಿನ್ನ ಅಮ್ಮ ಸಹ ನ ಮ್ಮ ಜೊತೆಯೇ ಇರಬಹುದು... ನಿನ್ನ ಅಪ್ಪನಿಗೂ ನನ್ನ ಜೊತೆ ಕೆಲ್ಸ ಕೊಡುತ್ತೇನೆ... ಅವರೂ ನಮ್ಮ ಜೊತೆಯೇ ಇರಲಿ.... ನನ್ನ ಆಸ್ತಿಯಲ್ಲಿ ಸಮಪಾಲು ನಿನಗೆ ಕೊಡುತ್ತೇನೆ... ನನ್ನ ಆಸ್ತಿಯ ಬಗ್ಗೆ ನಿನಗೆ ಗೊತ್ತೇ ಇದೆ... ಆದರೂ ನಿನಗೇಕೆ ಭವಿಷ್ಯದ ಚಿಂತೆ..? " ಸಹನೆ ಕಳೆದುಕೊಂಡೆ ನಾನು.... ಅವಳ ಕಣ್ಣಲ್ಲಿ ನೀರಿತ್ತು....

" ನೀವು ನನ್ನನ್ನ ಮದುವೆಯಾಗ್ತಾ ಇರೋದು ಯಾಕೆ ಅಂತ ಹೇಳಿದ್ರೀ...? ನಾನು ನಿಮ್ಮನ್ನು ನಿಮ್ಮ ಹೆಂಡತಿಗಿಂತ ಚೆನ್ನಾಗಿ ಕಾಳಜಿ ತೋರಿಸಿದೆ ಮತ್ತು ಪ್ರೀತಿಸಿದೆ ಅಂತ ತಾನೆ..? ನಾನು ನಿಮ್ಮ ಹೆಂಡತಿಗಿಂತ ಚೆನ್ನಾಗಿದೀನಿ ಅಂತ ತಾನೆ...? ಈಗ ನಾನು ನಿಮ್ಮನ್ನು ಮದುವೆಯಾದ ನಂತರವೂ ನನಗಿಂತ ಸುಂದರ, ನನಗಿಂತ ನಿಮ್ಮನ್ನು ಪ್ರಿತಿಸುವ, ಕಾಳಜಿ ತೋರಿಸುವವರು ಸಿಕ್ಕಾಗ ನನ್ನನ್ನೂ ಮರೆಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ...? ಅಷ್ಟು ಪ್ರೀತಿಸಿ ಮದುವೆಯಾದ ನಿಮ್ಮ ಹೆಂಡತಿಯನ್ನು ನನ್ನ ಸಲುವಾಗಿ ಬಿಡಲು ತಯಾರಾದ ನೀವು , ಇನ್ಯಾರದೋ ಸಲುವಾಗಿ ನನ್ನನ್ನು ಬಿಡೋದಿಲ್ಲಾ ಅನ್ನೋದಕ್ಕೆ ಏನು ಗ್ಯಾರಂಟಿ..? .. ನನಗೆ ನಿಮ್ಮ ಮೇಲೆ ಪ್ರೀತಿ ಇದೆ.. ಆದ್ರೆ ಅದಕ್ಕೆ ನಂಬಿಕೆ ಎನ್ನುವ  ಭದ್ರ ಬುನಾದಿ ಇಲ್ಲ ಎಂದ ಮೇಲೆ ಪ್ರೀತಿ ಮೇಲೂ ಅನುಮಾನ ಬರಲು ಶುರು ಆಗತ್ತೆ... ನನ್ನನ್ನು ಮರೆತು ಬಿಡಿ... ನಿಮ್ಮ ಹೆಂಡತಿ ಜೊತೆ ಇರ್ತೀರೋ ಇಲ್ಲವೋ ನಿಮಗೆ ಬಿಟ್ಟಿದ್ದು..." ಎನ್ನುತ್ತಾ ಕುಸಿದು ಕುಳಿತಳು....ಅಳಲು ಶುರು ಮಾಡಿದಳು....


ಎದುರಿಗೇ ಪ್ರಪಾತ ಬಂದ ಅನುಭವ ನನಗೆ... ಹೆಂಡತಿಯ ಮುಗ್ಧ ಮುಖ, ಮಗನ ಅಮಾಯಕ ನಗೆ ಕಣ್ಣೆದುರಿಗೆ ಬಂತು... ಕೊನೆಯ ಸಾರಿ ಮಗನನ್ನು ಬಿಟ್ಟು ಬರುವಾಗ ನನ್ನ ಕೈ ಬಿಡಲೊಪ್ಪದ ಆತನ ಕೈ ಬಿಸಾಡಿ ಬಂದಿದ್ದೆ... ಅದೇ ಕೈ ನೋಡಿಕೊಂಡೆ.... ಈಗ ಈ ಹುಡುಗಿ ನನ್ನ ಎದೆ ಮೇಲೆ ಒದ್ದು ಹೋಗುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ..... ನನಗೆ ಏನೂ ತೋಚಲಿಲ್ಲ... ಅವಳು ಹೇಳಿದ್ದು ತಪ್ಪು ಅಂತಾನೂ ಅನಿಸಲಿಲ್ಲ.... ಅವಳು ಸಾವಕಾಶವಾಗಿ ಎದ್ದು ನಡೆಯಲು ಶುರು ಮಾಡಿದಳು... ಅವಳ ಕಡೆ ನೋಡಿದೆ... ಸಂಜೆಯ ಬಿಸಿಲಿತ್ತು... ಅನಿರೀಕ್ಷಿತವಾಗಿ ಧೋ ಅಂತ ಮಳೆ ಬಂತು.... ಮಳೆ ನೀರು ಮುಖದ ಮೇಲೆ ಹರಿದು ಬಾಯಿಗೆ ಬಂತು.... ಉಪ್ಪುಪ್ಪು.... ಮಳೆ ನೀರ ಜೊತೆ ಕಣ್ಣೀರೂ ಸೇರಿತ್ತಾ.....? ತಿಳಿಯಲಿಲ್ಲ.....

Jul 8, 2013

ದೇವರ ಆಟ....!!!!



ಡಾಕ್ಟರ್ ಕೊಟ್ಟ ಸಮಯ ಮುಗಿದಿತ್ತು... ಎದೆಯ ಬಡಿತವೂ ಹೆಚ್ಚಿತ್ತು... ಅವರು ಹೇಳಿದಂತೆಯೇ ಆದರೆ ಖುಷಿ ಪಡುವುದೋ, ದುಖಃ ಪಡುವುದೋ ಅರ್ಥವಾಗಲಿಲ್ಲ...
... ಭಾರವಾದ ಮನಸ್ಸಿನಿಂದ ಕುಲದೇವರನ್ನು ನೆನೆಸಿದೆ... ಬದುಕಿಸಿ ಕೊಡು ಅಂತಲೋ, ಸಾಯಿಸಿ ಬಿಡು ಅಂತಲೋ ನನಗೂ ಗೊತ್ತಿರಲಿಲ್ಲ... ದೊಡ್ಡದೊಂದು ಉಸಿರು ಬಿಟ್ಟು ಎದ್ದೆ... ಅಕ್ಕ ಪಕ್ಕದಲ್ಲಿ ಏನೂ ಕಾಣುತ್ತಿರಲಿಲ್ಲ... ಐ.ಸಿ.ಯು. ಎಂದು ಬರೆದ ಬಾಗಿಲಿನ ಕಡೆ ನಡೆಯುತ್ತಿದ್ದೆ... ಗಡಿಬಿಡಿಯಿಂದ ಬರುವಾಗ ಹಾಕಿಕೊಂಡು ಬಂದ ಹವಾಯಿ ಚಪ್ಪಲಿಯ ಸದ್ದು ದೊಡ್ಡದಾಗಿ ಕೇಳಿಸುತ್ತಿತ್ತು... ಬಾಗಿಲಿನ ಹತ್ತಿರ ಬಂದು ಬಾಗಿಲು ತಳ್ಳುವವನಿದ್ದೆ........ ತನ್ನಷ್ಟಕ್ಕೆ ಬಾಗಿಲು ತೆರೆದುಕೊಂಡಿತು... ಒಳಗಡೆಯಿಂದ ಒಬ್ಬರು ನರ್ಸ್ ಬಂದರು... "ಡಾಕ್ಟರ್ ನಿಮಗೆ ಸ್ವಲ್ಪ ಸಮಯ ಕಾಯಲು ಹೇಳಿದ್ದಾರೆ... ಅವರೂ ಬರ್ತಾರಂತೆ ನಿಮ್ಮ ಜೊತೆ" ಅಂದರು ಆಕೆ... ಸ್ವಲ್ಪ ಸಮಾಧಾನವಾಯಿತು.. ಹೊರಗಡೆಯೇ ನಿಂತೆ... ನನ್ನ ಪಕ್ಕದಲ್ಲಿ ಒಬ್ಬರು ಹೊಸದಾಗಿ ಮದುವೆಯಾದ ಜೋಡಿ ನಿಂತಿದ್ದರು... ಅವರನ್ನು ನೋಡುತ್ತಲೇ ನಾನು ನನ್ನ ಕಥೆ ನೆನಪಿಸಿಕೊಂಡೆ....
                                                                                      *********
ಮದುವೆಯಾಗಿ ಆಗಷ್ಟೇ ವರುಷ ಕಳೆದಿತ್ತು.... ಹೆಂಡತಿಯ ಡೆಲಿವರಿ ದಿನಾಂಕವೂ ಹತ್ತಿರ ಬಂದಿತ್ತು.. ಡಾಕ್ಟರ್ ಹೇಳಿದ ದಿನವೇ ಅವರ ಹತ್ತಿರ ಹೋಗಿದ್ದೆವು..."ಇನ್ನೆರಡು ದಿನದಲ್ಲೇ ಹೆರಿಗೆ ಆಗತ್ತೆ, ಏನೂ ತೊಂದರೆ ಇಲ್ಲ.. ಹೆದರಬೇಡಿ... ನೋವು ಬಂದಾಗ ಬನ್ನಿ " ಎಂದರು..ನಮಗೆ ಅಳುಕು.. " ಮೇಡಮ್, ಏನೂ ತೊಂದರೆ ಇಲ್ಲಾ ತಾನೆ..?" ಎಂದೆ ನಾನು.. ಅವರು ಆರಾಮಾಗಿಯೇ ಹೇಳಿದರು.." ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ... ಹೆದರಬೇಡಿ" ಎಂದರು... ನಾವು ವಾಪಸ್ ಬಂದೆವು.. ಮನೆಗೆ ಬಂದು ತಲುಪುವಷ್ಟರಲ್ಲೇ ನನ್ನಾಕೆಗೆ ಹೆರಿಗೆ ನೋವು ಬಂತು...

ಕೂಡಲೇ ಅದೇ ರಿಕ್ಷಾದಲ್ಲೇ ವಾಪಸ್ ಆಸ್ಪತ್ರೆಗೆ ಬಂದೆವು.. ಡಾಕ್ಟರ್ ಮೆಡಮ್ ಇನ್ನೊಂದು ಡೆಲಿವರಿ ಕೇಸ್ ನಲ್ಲಿ ಇದ್ದರು.. ನಾವು  ಅಡ್ಮಿಟ್ ಆದೆವು... ನನ್ನಾಕೆಯ ನೋವು ವಿಪರೀತವಾಗಿತ್ತು... ನನಗೆ ಆಕೆಯ ನೋವು ನೋಡಲಾಗಲಿಲ್ಲ .. ಹೊರ ಬಂದೆ.. ಅಷ್ಟರಲ್ಲೇ ನನ್ನಾಕೆಯ ಅಮ್ಮ ಮತ್ತು ನನ್ನಮ್ಮ ಇಬ್ಬರೂ ಬಂದರು... ನನ್ನಾಕೆಯ ಅಮ್ಮನನ್ನು ಅವಳ ಹತ್ತಿರ ಕಳಿಸಿದೆ... ಎಷ್ಟಾದರೂ ಅಮ್ಮನಿಗೆ ಅರ್ಥ ಆಗೋದು ಅಮ್ಮನಾಗುವ ನೋವು ಅಲ್ವಾ...?

ಅಲ್ಲಿದ್ದ ನರ್ಸ್ ಹತ್ತಿರ ಕೇಳುತ್ತಾ ಇದ್ದೆ, ನನ್ನಾಕೆಯ ಸ್ಥಿತಿ.. ಅವರಿಗೋ, ಎಂದಿನಂತೆ ಇದೂ ಒಂದು ಡೆಲಿವರಿ ಕೇಸ್ ಅಷ್ಟೆ... ನಮಗೆ ಇದು ಜೀವನ್ಮರಣದ ಪ್ರಶ್ನೆಯಾಗಿತ್ತು.... ಮದುವೆಯಾಗಿ ಹೋದ ಮಗಳ ಮೊದಲನೇ ಹೆರಿಗೆಯನ್ನು ತವರು ಮನೆಯವರೇ ನೋಡಿಕೊಳ್ಳುವುದು ಕಾರಣ ಇದೂ ಇರಬಹುದೇನೋ... ಹೆರಿಗೆ ಎಂದರೆ ಮರಣದ ವಿರುದ್ದ ಹೋರಾಟವೇ ಸೈ ಎನ್ನುತ್ತಾರೆ... ನನ್ನಾಕೆಯ ನರಳಾಟ, ಕೂಗಾಟ ನನ್ನ ಕಿವಿಗೆ ಕೇಳಿಸುತ್ತಿತ್ತು...  ನನಗೂ ನೋವು ತರುತ್ತಿತ್ತು.. ಪಕ್ಕದಲ್ಲೇ ಇದ್ದ ಅಂಗಡಿಗೆ ಹೋದೆ... ಸಿಗರೇಟು ಸೇದೋಣ ಎಂದು... 

ಈ ಮಧ್ಯೆ ಆಸ್ಪತ್ರೆಯ ಒಳಗಡೆ ಹೋಗಿ ಡಾಕ್ಟರ್ ಹತ್ತಿರ ಮಾತನಾಡಿ ಬಂದಿದ್ದೆ... " ನೋವು ಬರ್ತಾ ಇದೆ ಆದರೆ ನಿಮ್ಮಾಕೆಯೂ ಒತ್ತಡ ಹಾಕಬೇಕು ಮಗು ಹೊರ ಬರಲು... ಇಲ್ಲದಿದ್ದರೆ ತೊಂದರೆ ಆಗತ್ತೆ.. ನಿಮ್ಮಾಕೆ ಸುಸ್ತಾಗಿದ್ದಾಳೆ " ಎಂದರು.. ನನಗೆ ಗಾಬರಿ ಆಯ್ತು... " ಈಗ ಏನ್ಮಾಡೊದು ಮೇಡಮ್..? " ಎಂದೆ ಗಾಬರಿಯಿಂದ.. " ಹೆದರಬೇಡಿ, ನಿಮ್ಮಾಕೆಗೆ ಧೈರ್ಯ ಹೇಳಿ... ಒತ್ತಡ ಹಾಕಲು ಹೇಳಿ..ಎಲ್ಲಾ ಸರಿಯಾಗತ್ತೆ" ಎನ್ನುತ್ತಲೇ ಒಳಗೆ ಓಡಿದರು ಆಕೆ ಇನ್ನೊಂದು ಕೇಸಿನ ಸಲುವಾಗಿ... ನಾನು ಅಲ್ಲಿದ್ದ ಇನ್ನೊಂದು ನರ್ಸ್ ಹತ್ತಿರ ಕೇಳಿದೆ... " ತೊಂದರೆ ಇದ್ದರೆ ಸೀಸರಿನ್ ಮಾಡಬಹುದು ಅಲ್ವಾ..? " ಎಂದೆ...

" ನಮ್ಮ ಹತ್ತಿರ ಅನೆಸ್ಥೇಷಿಯಾ ಡಾಕ್ಟರ್ ಇಲ್ಲಾ, ಅವರು ರಜೆ ಮೇಲಿದ್ದಾರೆ , ನೀವು ಹೆದರಬೇಡಿ, ನಾರ್ಮಲ್ ಡೆಲಿವರಿ ಆಗತ್ತೆ " ಎಂದು ಹೇಳಿದರು ಆಕೆ.. ನನಗೆ ಇನ್ನೂ ಗಾಬರಿ...ಮತ್ತದೇ ಪಕ್ಕದ ಅಂಗಡಿಗೆ ಹೋದೆ... ಬಿಸಿ ಗಾಳಿಗಾಗಿ.... ನಾಲ್ಕು ತಾಸು..... ನಾಲ್ಕು ತಾಸು.. ಅಂಡು ಸುಟ್ಟ ಬೆಕ್ಕಿನ ಹಾಗೆ ಅಲ್ಲಿಂದ ಇಲ್ಲಿಗೆ , ಇಲ್ಲಿಂದ ಅಲ್ಲಿಗೆ ಓಡಾಡಿದೆ.... ನನ್ನ ಅಮ್ಮ ಓಡುತ್ತಾ ಬಂದರು... " ಆ ನರ್ಸ್ ಹೇಳ್ತಾ ಇದ್ದಾರೆ, ಡೆಲಿವರಿ ಆಗಿದೆಯಂತೆ... ಮಗುವಿಗೆ ಉಸಿರಾಟದ ತೊಂದರೆ ಆಗಿದೆಯಂತೆ... ಡಾಕ್ಟರ್ ಹತ್ತಿರ ಮಾತನಾಡೋಣ ಬಾ... ಅಗತ್ಯ ಬಿದ್ದರೆ ಮಣಿಪಾಲಿಗೆ ಕರೆದುಕೊಂಡು ಹೋಗೋಣ" ಎನ್ನುತ್ತಲೇ ಆಕೆ ಅಳಲು ಶುರು ಮಾಡಿದರು...

ನಾನು ಓಡುತ್ತಾ ಆಸ್ಪತ್ರೆಗೆ ಬಂದೆ... ಅಲ್ಲಿದ್ದ ಮಕ್ಕಳ ಡಾಕ್ಟರ್ ಹತ್ತಿರ ಕೇಳಿದೆ... ಅವರು " ನಿಮ್ಮಾಕೆ ಮಗು ಹೊರ ಬರುವ ಸಮಯದಲ್ಲೇ ಸುಸ್ತಾಗಿದ್ದರು.. ಅವರಿಗೆ ಸಾಕಷ್ಟು ಒತ್ತಡ ಕೊಡಲು ಆಗಲೇ ಇಲ್ಲ.. ಮಗು ಅರ್ಧ ಹೊರ ಬಂದಾಗ ಇವರಿಗೆ ಎಚ್ಚರ ಇರಲಿಲ್ಲ.. ಹಾಗಾಗಿ ಮಗುವಿಗೆ ಉಸಿರಾಟದ ತೊಂದರೆ ಆಗಿದೆ... ಇನ್ನೊಂದು ವಿಷಯ ಎಂದರೆ ಹೊಕ್ಕಳ ಬಳ್ಳಿ ಮಗುವಿನ ಕುತ್ತಿಗೆಯ ಸುತ್ತಲೂ ಬಂದು ಮಗು ಗರ್ಭದಲ್ಲೇ ಇರುವಾಗ ವಿಸರ್ಜನೆ ಮಾಡಿಕೊಂಡಿದೆ ಮತ್ತು ಅದು ಮಗುವಿನ ಮೂಗಿನ ಮೂಲಕ ಶ್ವಾಸಕೋಶ ಸೇರಿದೆ... ಮೆದುಳಿಗೆ ಆಮ್ಲಜನಕದ ಸರಬರಾಜು ಆಗಿದೆಯೋ ಇಲ್ಲವೋ ಎನ್ನುವ ಅನುಮಾನವೂ ನಮಗಿದೆ..." ಎಂದರು..

ನಿಂತ ನೆಲ ಕುಸಿದ ಅನುಭವ ನನಗೆ... ಕೈಯಿ ಸಿಗರೇಟು ಹುಡುಕುತ್ತಿತ್ತು... ಅವರೇ ಮುಂದುವರಿದು " ಈಗ ಏನೂ ಹೇಳಲು ಬರುವುದುಲ್ಲ... ಆಕ್ಷಿಜನ್ ಬಾಕ್ಸ್ ನಲ್ಲಿ ಇಟ್ಟಿದ್ದೇನೆ... ಈ ಸಮಯದಲ್ಲಿ ಯಾವುದೇ ಆಸ್ಪತ್ರೆಗೆ ಹೋದರೂ ಮಾಡುವುದು ಇದನ್ನೇ... ಹಾಗಾಗಿ ಇನ್ನೂ ಸ್ವಲ್ಪ ಹೊತ್ತು ಕಾಯೋಣ... ಉಸಿರಾಟ ಸರಿಯಾದ ಬಳಿಕ ಮಣಿಪಾಲಿಗೆ ಕರೆದುಕೊಂಡು ಹೋಗಿ " ಎಂದರು ಅವರು... ನಾನು ಆಗಲೇ ಡೆಲಿವರಿ ಮಾಡಿದ ಡಾಕ್ಟರ್ ಹುಡುಕಿಕೊಂಡು ಹೊರಟೆ... ಮಗು ಹೊಟ್ಟೆಯಲ್ಲೇ ವಿಸರ್ಜನೆ ಮಾಡಿಕೊಂಡರೆ, ಹೊಕ್ಕಳ ಬಳ್ಳಿ ಸುತ್ತು ಹಾಕಿಕೊಂಡರೆ ಸ್ಕ್ಯಾನಿಂಗ್ ಮಾಡಿದಾಗ ಗೊತ್ತಾಗುವುದಿಲ್ಲವಾ...? ಇವರ ಆಸ್ಪತ್ರೆಯ ಸ್ಕ್ಯಾನಿಂಗ್ ಮಸಿನ್ ಕೆಟ್ಟಿದ್ದರೆ ಬೇರೆಯವರ ಬಳಿ ಕಳಿಸಬಹುದಿತ್ತಲ್ಲ....? ತಲೆ ತುಂಬಾ ಪ್ರಶ್ನೆಗಳೇ ತುಂಬಿತ್ತು.... ಉತ್ತರ ಹೇಳುವವರು ಯಾರೂ ಇರಲಿಲ್ಲ...

ಅಷ್ಟರಲ್ಲೇ ಅದೇ ಮಕ್ಕಳ ಡಾಕ್ಟರ್ ಕರೆದರು... " ಮಗುವಿನ ಉಸಿರಾಟ ಸರಿಯಾಗುತ್ತಾ ಇದೆ... ಕೂಡಲೇ ಮಣಿಪಾಲಿಗೆ ಕರೆದುಕೊಂಡು ಹೋಗಿ" ಎಂದ ಅವರು ಅಂಬುಲನ್ಸ್ ಗೆ ಕರೆ ಮಾಡಿದರು... ಮುಂದಿನ ಮೂರೇ ತಾಸಿನಲ್ಲಿ ಮಣಿಪಾಲಿನ ಐ.ಸಿ.ಯು ನಲ್ಲಿ ನನ್ನ ಮಗುವಿತ್ತು... ನನ್ನಾಕೆ ಇನ್ನೂ ಊರಲ್ಲೇ ಇದ್ದಳು... ಇಲ್ಲಿಗೆ ತಂದ ಒಂದು ವಾರದ ತನಕವೂ ನಮಗೆ ಮಗುವಿಗೆ ಏನಾಗಿದೆ, ಯಾಕೆ ಹೀಗಾಯ್ತು ಎನ್ನುವ ಸರಳ ಪ್ರಶ್ನೆಗಳಿಗೂ ಉತ್ತರ ದೊರಕಲಿಲ್ಲ... ನನಗೆ ನನ್ನ ಮಗು ಸರಿಯಾಗಬೇಕಿತ್ತು ಅಷ್ಟೇ... ನನ್ನ ಮಗುವಿನ ಮುಂದೆ ಮತ್ತೆಲ್ಲಾ ಪ್ರಶ್ನೆಗಳೂ ಗೌಣವಾಗಿದ್ದವು...

ಮಣಿಪಾಲ್ ಡಾಕ್ಟರ್ ಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರು.... ಅವರ ಪ್ರಯತ್ನ ಕೈಗೂಡುವ ಲಕ್ಷಣ ಒಂದು ದಿನ ಕಂಡರೆ , ಇನ್ನೊಂದು ದಿನ ಕಾಣುತ್ತಿರಲಿಲ್ಲ... ದಿನಾಲೂ ಹೋಗಿ ಮಗುವನ್ನು ನೋಡಿ ಬರುತ್ತಿದ್ದೆ... ಮಗುವಿನಲ್ಲಿ ಏನೂ ಚಲನೆ ಇರಲಿಲ್ಲ.. ಕಣ್ಣು ಮುಚ್ಚೇ ಇತ್ತು... ಮಗು ಅಳುತ್ತಲೂ ಇರಲಿಲ್ಲ..
ಡಾಕ್ಟರ್ ಕೇಳಿದರೆ " ಈಗ ಏನೂ ಹೇಳಲು ಬರುವುದಿಲ್ಲ, ಸ್ವಲ್ಪ ದಿನ ಕಾಯಬೇಕು.. ಸ್ವಲ್ಪ ಟೆಸ್ಟ್ ಸಹ ಮಾಡಲಿಕ್ಕಿದೆ.... ಎಂದು ಹೇಳುತ್ತಿದ್ದರು..

ಇಲ್ಲಿಗೆ ಬಂದ ಹದಿನೈದು ದಿನದ ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋದ ಡಾಕ್ಟರ್ ನನ್ನ ಮಗುವನ್ನು ತೋರಿಸಿದರು.. ಪ್ರಶಾಂತ ನಿದ್ರೆಯಲ್ಲಿತ್ತು ನನ್ನ ಮಗು... ಈಗಷ್ಟೇ ಸ್ನಾನ ಮಾಡಿಸಿ ಮಲಗಿಸಿದ ಹಾಗಿತ್ತು... ಆದರೆ ಚಲನೆ ಇರಲಿಲ್ಲ, ಉಸಿರಾಟದ ತೊಂದರೆ ಈಗಲೂ ಇತ್ತು... ಡಾಕ್ಟರ್ ನನಗೆ ಮಗುವಿನ ತಲೆಯ
 ಸುತ್ತ ತೊರಿಸಿ ಹೇಳಿದರು... " ಹೆರಿಗೆಯ ಸಮಯದಲ್ಲಿ ಮಗು ಅರ್ಧ ಹೊರ ಬಂದಾಗ ಮಗುವಿನ ತಲೆಯನ್ನು ಇಕ್ಕಳ ಉಪಯೋಗಿಸಿ ಹೊರ ತೆಗೆದಿದ್ದಾರೆ... ಹಾಗಾಗಿ, ಮಗುವಿನ ತಲೆಗೆ ಪೆಟ್ಟಾಗಿದೆ... ಹೊಕ್ಕಳ ಬಳ್ಳಿ ಕುತ್ತಿಗೆಗೆ ಸುತ್ತಿಕೊಂಡೆದೆ... ಮಗು ಗರ್ಭದಲ್ಲೇ ಮಲವಿಸರ್ಜನೆ ಮಾಡಿಕೊಂಡ ಕಾರಣ, ಮೂಗಿನಲ್ಲಿ ಹೋಗಿ ಶ್ವಾಸಕೋಶ ಬಂದ್ ಆಗಿದೆ... ಮೆದುಳಿಗೂ ಆಮ್ಲಜನಕ ಪೂರೈಕೆ ಆಗಿಲ್ಲ... ಹಾಗಾಗಿ ಮುಂದಕ್ಕೆ ಮಗುವಿನ ಬೆಳವಣಿಗೆ ಸರಿ ಆಗತ್ತೆ ಅನ್ನುವ ಬರವಸೆ ಇಲ್ಲಾ... "

ಕಾದ ಕಬ್ಬಿಣ ಸುರಿದ ಹಾಗೆ ಆಯ್ತು.... ಮಾತು ಹೊರಡಲಿಲ್ಲ... ಮೈ ಬೆವರುತ್ತಿತ್ತು ಅಂಥಹ ಏ.ಸಿ. ಯಲ್ಲೂ.... ಅವರೂ ಇನ್ನೂ ಮುಂದುವರಿದು " ಈಗ ಮಗು ಜೀವ  ಆಕ್ಷಿಜನ್ ಪೂರೈಕೆಯ ಮೇಲೆ ನಿಂತಿದೆ.. ಇದರ ಪೂರೈಕೆ ನಿಲ್ಲಿಸಿದರೆ.... " ಒಂದು ಕ್ಷಣ ನಿಂತು " ಮಗು ಸಾಯತ್ತೆ " ಅಂದರು...  ನನಗೆ ಅಳು ತಡೆಯಲಾಗಲಿಲ್ಲ... ಈ ಮಗುವನ್ನು ಎತ್ತಲಿಲ್ಲ...ಮುದ್ದಾಡಿರಲಿಲ್ಲ... ಮಗುವಿನ ಮುಖವನ್ನೂ ಸರಿಯಾಗಿ ನೋಡಿರಲಿಲ್ಲ... ಆದರೂ...ನನ್ನ ಅಂಶವನ್ನು ಹಂಚಿಕೊಂಡು ಹುಟ್ಟಿದ ಮಗುವಾಗಿತ್ತು... ಕಣ್ಣಲ್ಲಿ ನೀರು ತುಂಬಿ ಬಂತು.... ಡಾಕ್ಟರ್ ನನ್ನ ಹೆಗಲ ಮೇಲೆ ಕೈ ಹಾಕಿ ಹೇಳಿದರು... " ಸಮಾಧಾನ  ಮಾಡಿಕೊಳ್ಳಿ, ಇದೆಲ್ಲಾ ನಮ್ಮ ಕೈಯಲ್ಲಿ ಇರಲ್ಲ... ಮೇಲಿನವನು ಆಡಿಸುತ್ತಾನೆ, ನಾವು ಆಡಬೇಕು....  ಯಾರ ಹಣೆಬರಹದಲ್ಲಿ ಎಷ್ಟು ಆಯಸ್ಸು ಇರತ್ತೋ, ಅಷ್ಟೇ ದಿನ ಬದುಕಿರೋದು.... ಅದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ..."

ನಾನು ಡಾಕ್ಟರನ್ನ ತಬ್ಬಿ ಹಿಡಿದೆ.... ಕಣ್ಣಲ್ಲಿ ನೀರು ನಿಲ್ಲುತ್ತಿರಲಿಲ್ಲ.."ಈಗ ಒಂದು ವಿಷಯವನ್ನು ನಿಧಾನವಾಗಿ ಯೋಚಿಸಿ.... ಈ ಮಗು ಹೀಗೆ ಬೆಳೆದರೆ ಖಂಡಿತವಾಗಿಯೂ ಅಂಗವಿಕಲವಾಗಿಯೇ ಬೆಳೆಯತ್ತೆ.. ಇಂಥಾ ಮಗುವನ್ನು ನೋಡಿಕೊಳ್ಳಲೂ ನಿಮಗೆ ನಿಮ್ಮ ಕುಟುಂಬದವರಿಗೆ ತುಂಬಾ ತಾಳ್ಮೆ ಬೇಕು... ಆರ್ಥಿಕವಾಗಿಯೂ ಗಟ್ಟಿತನ ಬೇಕು... ಈಗ ಮಗು ಬರಿಯ ಆಮ್ಲಜನಕ ಸಹಾಯದಿಂದ ಅಷ್ಟೇ ಬದುಕಿದೆ.... ಅದನ್ನ ನಿಲ್ಲಿಸಿದರೆ ಖಂಡಿತ ಮಗು ಸಾಯತ್ತೆ..... ಇನ್ನು ನಿಮ್ಮ ನಿರ್ಧಾರ ಹೇಳಿ...ನೀವು ಹೇಳಿದಂತೆ ನಾವು ಕೇಳುತ್ತೇವೆ... " ಎಂದು ಹೇಳಿ ಅವರು ಹೊರಟರು.... ನಾನು ಹೊರಕ್ಕೆ ಬಂದೆ.. ಬರುವ ಮೊದಲೊಮ್ಮೆ ಮಗುವಿನತ್ತ ನೋಡಿದೆ... ಅದೇ ಪ್ರಶಾಂತ ನಿದ್ರೆ...

ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಶಬ್ಧ... ಕಣ್ಣಲ್ಲಿ ನೀರು ಇಂಗಿತ್ತು.... ಡಾಕ್ಟರ್ ಹೇಳಿದ ಕೊನೆಯ ಮಾತು ಮಾರ್ಧನಿಸುತ್ತಿತ್ತು.... ನನ್ನ ತೀರ್ಮಾನವೇ ಮಗುವಿನ ಹಣೆಬರಹ ನಿರ್ಧರಿಸುತ್ತದೆ ಎಂದಾದರೆ ದೇವರು ಬರೆದ ಹಣೆಬರಹದ ಗತಿ ಏನು..? ಮುಂದೆ ಅಂಗವಿಕಲವಾಗಿ ಬೆಳೆಯುವ ಮಗುವನ್ನು ದಿನಾಲೂ ನೋಡುತ್ತಾ ನೋವು ಅನುಭವಿಸಬೇಕಾ..? ನಾನು ನನ್ನಾಕೆ ಬದುಕಿರುವ ತನಕ ಈ ಮಗುವಿನ ಸೇವೆ ಮಾಡಬಹುದು... ನಮ್ಮ ನಂತರ.....??? ಮಗು ದೈಹಿಕವಾಗಿ ತಾನೂ ನೋವು ತಿನ್ನಬೇಕು, ಮಾನಸಿಕವಾಗಿ ನಮಗೂ ನೋವು ತಿನ್ನಿಸಬೇಕಾ..? ಇಂಥಹ ನರಕ ವೇದನೆಗಿಂತ ಮಗು ಕಣ್ಣು ಬಿಡುವ ಮೊದಲೇ ಅಂತ್ಯ ಕಂಡರೆ...? .. ಮನಸ್ಸು ಹೊಯ್ದಾಟಕ್ಕಿಳಿದಿತ್ತು.... ನನ್ನ ಅಂಶ ಹಂಚಿಕೊಂಡು ಹುಟ್ಟಿದ ಮಗುವನ್ನು ನನ್ನ ತೀರ್ಮಾನವೇ ಕೊಲ್ಲತ್ತಾ...?

ಗಟ್ಟಿ ನಿರ್ಧಾರ ಮಾಡಿ ಒಳ ಹೋದೆ... ಡಾಕ್ಟರ್ ನನ್ನತ್ತ ’ ಏನು ನಿಮ್ಮ ತೀರ್ಮಾನ .?’ ಎನ್ನುವಂತೆ ನೋಡಿದರು... ನನ್ನ ನಾಲಿಗೆ ಪಸೆ ಆರಿತ್ತು... ಆದರೂ ಧೈರ್ಯ ಮಾಡಿ " ಆಕ್ಷಿಜನ್ ಪೂರೈಕೆ ನಿಲ್ಲಿಸಿ ಡಾಕ್ಟರ್ " ಎಂದೆ , ಕಣ್ಣಲ್ಲಿ ನೀರು ನಿಲ್ಲಲಿಲ್ಲ.... ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನಾಕೆಯನ್ನೂ , ಅಪ್ಪ ಅಮ್ಮನನ್ನೂ ಕೇಳಲಿಲ್ಲ... ಅವರಲ್ಲಿ ಕೇಳಿದ್ದರೆ ಖಂಡಿತ ಅವರು ನನ್ನ ನಿರ್ದಾರವನ್ನು ಬೆಂಬಲಿಸುತ್ತಿರಲಿಲ್ಲ... ಕೆಲವೊಮ್ಮೆ ವ್ಯಾವಹಾರಿಕವಾಗಿ ಯೋಚಿಸಬೇಕಾಗುತ್ತದೆ... ಅದು ಜೀವದ ಪ್ರಶ್ನೆಯೇ ಆದರೂ........

ಡಾಕ್ಟರ್ ಮಗುವಿನ ಆಮ್ಲಜನಕದ ಲೆಕ್ಕ ನೋಡುತ್ತಿದ್ದರು.... ೯೫ ಅಂದಿತ್ತು... " ಸರ್, ಇನ್ನು ಎಷ್ಟು ಹೊತ್ತು....." ಅಂತ ಕೇಳಿದೆ... ಅವರಿಗೆ ಅರ್ಥವಾಯಿತು ಅನ್ಸತ್ತೆ.... " ಸಾಮಾನ್ಯವಾಗಿ ಆಮ್ಲಜನಕದ ಪ್ರಮಾಣ ೯೫ ಕ್ಕಿಂತ ಹೆಚ್ಚಿರಬೇಕು.... ಕ್ರಮೇಣ ಇದರ ಪ್ರಮಾಣ ಕಡಿಮೆಯಾಗುತ್ತಾ ಬಂದು ೫೦ ಕ್ಕಿಂತ ಕಡಿಮೆಗೆ ಬರುತ್ತದೆ... ಹೆಚ್ಚೆಂದರೆ ಇನ್ನು ಒಂದು ತಾಸು..." ಎಂದರು ಅವರು... ಆಮ್ಲಜನಕದ ಪೂರೈಕೆ ನಿಲ್ಲಿಸಿದರು..ನಾನು ಒಮ್ಮೆ ಮಗುವನ್ನು ನೋಡಿದೆ, ಕೊನೆಯ ಬಾರಿ ಎಂಬಂತೆ... ಆಮ್ಲಜನಕ ಸಿಗದೇ ಮಗು ಸಣ್ಣಗೆ ನಡುಗಿತು.... ನಾನು ಅವಳಿದೆ ಚುಚ್ಚಿದ್ದ ಕಂಪ್ಯೂಟರ್ ಪರದೆ ನೋಡಿದೆ...
೯೨ ಎಂದಿತ್ತು.....
ಅಲ್ಲೇ ನಿಂತೆ....
ನಾನು ಮಾಡುತ್ತಿದ್ದುದು ಸರೀನಾ... ತಪ್ಪಾ....
ಇನ್ನೊಮ್ಮೆ ನೋಡಿದೆ...
೮೮....
ಮಗು ಕಡೆ ನೋಡಿದೆ...
ಕೈ ಕಾಲು ಆಡಿಸುತ್ತಿತ್ತು....
ಧುಖಃ ಉಮ್ಮಳಿಸುತ್ತಿತ್ತು....
ಆಮ್ಲಜನಕ ಇದ್ದಾಗ ಕೈ ಕಾಲು ಆಡಿಸಿರಲಿಲ್ಲ..ಈಗ ಕಡಿಮೆ ಆದಾಗ ಕೈ ಕಾಲು ಆಡಿಸುತ್ತಿತ್ತು...

ನನಗೆ ಅಲ್ಲಿ ನಿಲ್ಲಲಾಗಲಿಲ್ಲ.... ಅದೇ ಸಮಯಕ್ಕೆ ಡಾಕ್ಟರ್ " ನೀವು ಹೊರಗೆ ಬನ್ನಿ, ಆಮ್ಲಜನಕ ಇಳಿಕೆಯ ಗತಿ ನೋಡಿದರೆ ಹೆಚ್ಚೆಂದರೆ ಒಂದು ತಾಸು.... ಬನ್ನಿ ಹೊರಗೆ ಕುಳಿತುಕೊಳ್ಳಿ... ನಾನು ಆಫಿಸಿಗೆ ಹೋಗಿ ಬರುತ್ತೇನೆ.... ಅಲ್ಲಿಯವರೆಗೆ ಹೊರಗೆ ಕುಳಿತಿರಿ " ಎಂದು ನನ್ನನ್ನು ಹೊರಗೆ ಕರೆದುಕೊಂಡು ಬಂದರು... ನನಗೂ ಅದೇ ಬೇಕಾಗಿತ್ತು.... ಕೊನೆಯ ಸಾರಿ ಮಗುವಿನ ಮುಖ ನೋಡುವ ಮನಸ್ಸಾದರೂ ನೋಡಲಿಲ್ಲ....
 
                                                        ******************
’ಡಾಕ್ಟರ್ ಬಂದರು ’ ಎನ್ನುವ ಮಾತು ಕೇಳಿ ವಾಸ್ತವಕ್ಕೆ ಬಂದೆ... ಅಲ್ಲಿದ್ದ ನವ ಜೋಡಿ ಹೊರಟು ಹೋಗಿತ್ತು.... ಡಾಕ್ಟರ್ ಬರುತ್ತಾ ಇದ್ದರು.... " ಒಳಗೆ ಬರುವ ಧೈರ್ಯ ಇದ್ದರಷ್ಟೇ ಬನ್ನಿ.... ಇಲ್ಲದಿದ್ದರೆ ಬೇಡ... ಮುಂದಿನ ಕಾರ್ಯ ನಾವೇ ಮಾಡುತ್ತೇವೆ.... " ಎಂದರು.... " ಇಲ್ಲ, ನಾನು ಬರುತ್ತೇನೆ.." ಎಂದು ಹೇಳಿ ಅವರ ಹಿಂದೆಯೇ ಹೋದೆ... ಮಗುವಿನತ್ತ ನೋಡುವ ಧೈರ್ಯ ಇರಲಿಲ್ಲವಾದರೂ ನೋಡಿದೆ.... ಮಗು ನಿಷ್ಚಲವಾಗಿತ್ತು.... ಆಮ್ಲಜನಕ ಪೂರೈಕೆ ಇರಲಿಲ್ಲ.... ಕಂಪ್ಯೂಟರ್ ಕಡೆ ನೋಡಿದೆ..... ಆಶ್ಚರ್ಯ....೯೫ ಎಂದಿತ್ತು..... ನಾನು ಡಾಕ್ಟರ್ ಕಡೆ ನೋಡಿದೆ... ಅವರೂ ನನ್ನತ್ತ ನೋಡುತ್ತಿದ್ದರು..... ಅಲ್ಲಿದ್ದ ನರ್ಸ್ ಕರೆದು ಕೇಳಿದರು... " ಸರ್, ಮಗುವಿಗೆ ಆಕ್ಷಿಜನ್ ನಿಲ್ಲಿಸಿದಾಗ ಅದರ ಲೆವೆಲ್ ೯೫ ಇತ್ತು.... ಕ್ರಮೇಣ ಅದು ೭೫ ರ ತನಕ ಬಂತು... ಅದಾದ ನಂತರ ಮಗು ಒಮ್ಮೆ ಸೀನಿತು... ಅದಾದ ನಂತರ ಆಕ್ಷಿಜನ್ ಲೆವೆಲ್ ಮೇಲೇರುತ್ತಾ ಬಂತು.... ನಮ್ಗೂ ಅರ್ಥ ಆಗ್ತಾ ಇಲ್ಲಾ ಸರ್.." ಎಂದರು ಆಕೆ.... ಡಾಕ್ಟರ್ ನನ್ನತ್ತ ತಿರುಗಿ... " ಈ ಮಗುವಿನ ಆಯುಶ್ಯ ನಮ್ಮ ಕೈಲಿ ಇಲ್ಲ ಅಂತ ನಿರೂಪಿಸಿದ ಹಾಗೆ ಆಯಿತು.... ಕ್ಷಣ ಕಾಲ ನಾವು ಮೇಲಿನವನನ್ನು ಮರೆತೆವು.... ನಾವೇ ಹಣೆಬರಹ ತಿದ್ದಲು ಹೊರಟೆವು.... ಆದ್ರೆ ಸೋತೆವು..." ಎಂದರು... ನಾನು ಮಗುವಿನ ಕಡೆ ನೋಡಿದೆ.... ಮಗು ಕಣ್ಣು ತೆರೆದ ಹಾಗಾಯಿತು... ಕಪಾಳಕ್ಕೆ ಹೊಡೆದ ಅನುಭವ....



Jun 11, 2013

ಅಕ್ರಮ-ಸಕ್ರಮ.....

                   
  

    ತಲೆ ಎತ್ತಿ ನೋಡಿದೆ.... ಸರಿಯಾಗಿ ಓದಲಾಗಲಿಲ್ಲ ... ವಯಸ್ಸು ನಿವ್ರತ್ತಿಯ ಅಂಚಿಗೆ ಬಂದಿತ್ತು.... ಕಣ್ಣೂ ಕನ್ನಡಕದ ಸಹಾಯ ಪಡೆದಿತ್ತು... ಕನ್ನಡಕದ ಹಿಂದಿನ ಕಣ್ಣನ್ನು ಇನ್ನೂ ಕಿರಿದು ಮಾಡಿ ನೋಡಿದೆ.... ’ ವಿಶ್ವಾಯುಕ್ತ ಕಛೇರಿ ’ ಎಂದು ದೊಡ್ಡದಾಗಿ ಬರೆದಿತ್ತು... ಒಳಗೆ ಹೋದೆ.. ಯಾರೂ ಬಂದಿರಲಿಲ್ಲ... ಅಲ್ಲೇ ಇದ್ದ ಖಾಲಿ ಖುರ್ಚಿ ಮೇಲೆ ಕುಳಿತೆ... ನಾನೆಂದೂ ಈ ಕಛೇರಿಗೆ , ಈ ಕೆಲಸಕ್ಕಾಗಿ ಬರಬೇಕಾಗಿ ಬರಬಹುದು ಎಣಿಸಿರಲಿಲ್ಲ... ಆದರೂ ಬರಬೇಕಾಗಿ ಬಂತು... ಎಲ್ಲಾ ನನ್ನ ವಿಧಿ... ಕಛೇರಿಯ ಗುಮಾಸ್ತ ಬಂದ ಎನಿಸತ್ತೆ.... ನಾನು ಎದ್ದು ನಿಂತೆ... ಈ ಕಛೇರಿಯಲ್ಲಿ ಕೆಲಸ ಮಾಡುವ ಕತ್ತೆಗೂ ನಾವು ಗೌರವ ಕೊಡಬೇಕು..ಇಲ್ಲದಿದ್ದರೆ ಅವೂ ಒದೆಯುತ್ತವೆ, ಹಿಂದಿನಿಂದ...

  "ಯಾರಿಗೆ ಸಿಗಬೇಕಿತ್ತು...?” ಕೇಳಿದ ಆತ... ನಾನು ಅವರ ಹೆಸರು ಹೇಳಿದೆ... (ನಿಮಗ್ಯಾಕೆ ಬಿಡಿ , ಅವರ ಹೆಸರು..) . " ಅಲ್ಲಿ ಕುಳಿತುಕೊಳ್ಳಿ, ಇನ್ನರ್ಧ ಘಂಟೆಯಲ್ಲಿ ಬರ್ತಾರೆ" ಎಂದ ಆತ.... ನಾನು ಆತ ಹೇಳಿದಲ್ಲಿಯೇ ಹೋಗಿ ಕುಳಿತೆ... ನಾನು ಕುಳಿತೆನಾದರೂ  ಮನಸ್ಸು ಎರಡು ತಿಂಗಳ ಹಿಂದಕ್ಕೆ ಓಡಿತು....  

                                                                                                                             
                    *********************************

      ಇದೊಂದೇ ಕೆಲಸ ಬಾಕಿ ಇತ್ತು... ನಾಳೆಯಿಂದ ಐದು ದಿನ ರಜೆ ಹಾಕಿದ್ದೆ... ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ರಜೆಗೆ ಬರ ಇರಲಿಲ್ಲ... ನಾಡಿದ್ದು ಮಗಳ ನಿಶ್ಚಿತಾರ್ಥ ಇದೆ.. ಎಲ್ಲಾ ರೆಡಿಯಾಗಿತ್ತು.. ಅಂತಿಮ ಹಂತದಲ್ಲಿ ಹೆಂಡತಿಯ ಅಪೇಕ್ಷೆ ಮನೆಯ ಎದುರಿಗೆ ಶಾಮಿಯಾನಾ ಹಾಕುವುದಾಗಿತ್ತು... ಎಲ್ಲದ್ದಕ್ಕೂ ದುಡ್ಡು ಹೊಂದಿಸಿಕೊಂಡಿದ್ದೆ.. ಇದಕ್ಕೆ ಮಾತ್ರ ಸ್ವಲ್ಪ ಹೆಚ್ಚಿಗೆ ದುಡ್ಡು ಬೇಕಾಗಿತ್ತು.. ನಮ್ಮ ಆಫೀಸಿನಲ್ಲಿ ಒಂದೆರಡು ಜನರ ಹತ್ತಿರ ಸಾಲ ಪಡೆದಿದ್ದೆ.. ಆದ್ರೆ, ಮತ್ತೆ ಅವರಲ್ಲಿ ಹಣ ಕೇಳಲು ಮನಸ್ಸು ಬಂದಿರಲಿಲ್ಲ.. ಎರಡೇ ತಿಂಗಳಲ್ಲಿ ನನ್ನ ನಿವ್ರತ್ತಿಯೂ ಇತ್ತು... ಮದುವೆಗೂ ಸಾಲ ಕೇಳಬೇಕಿತ್ತಲ್ಲ.. ಅದಕ್ಕೇ ಮನಸ್ಸು ಹಿಂಜರಿದಿತ್ತು.. ಯಾವುದೇ ಕೆಲಸಕ್ಕೂ ನಾನು ಲಂಚ ಮುಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು.. ನನ್ನ ಮೇಲಧಿಕಾರಿ ಧಾರಾಳವಾಗಿ ಹಣ ತಿನ್ನುತ್ತಿದ್ದರೂ , ನಾನು ಅದನ್ನ ದೂರ ಇಟ್ಟಿದ್ದೆ.. 

   ಇವತ್ತಿನ ಒಂದು ಕೆಲಸ ಬೇಗನೇ ಮಾಡಿ, ಬೇಗ ಮನೆಗೆ ಹೊರಡಲು ತಯಾರಾಗಿದ್ದೆ.. ಕೆಲಸ ಮುಗಿದಿತ್ತು, ಮೇಲಧಿಕಾರಿ ಸಹಿ ಮಾಡಿಸಿ ಇಟ್ಟಿದ್ದೆ. ಆತ ಸಹಿ ಮಾಡುವಾಗ "ಈ ಕೆಲಸ  ಮಾಡಿ ಕೊಟ್ಟಿದ್ದಕ್ಕೆ ಅವರಿಂದ ಏನಾದರೂ  ತೆಗೆದುಕೊಳ್ಳಿ ರಾಯರೆ.. ನಿಮ್ಮ ಮಗಳ ಮದುವೆ ಕೆಲಸಕ್ಕೆ ಸಹಾಯ ಆದೀತು.." ಎಂದರು.. ನಾನು " ಬೇಡ ಸರ್, ಹಣ ಬೇಕಾದರೆ ನಿಮ್ಮನ್ನೇ ಕೇಳುತ್ತೇನೆ" ಎಂದಿದ್ದೆ..... ಅವರಿಗೆ ನನ್ನ ಗುಣ ಗೊತ್ತಿತ್ತು.. ಸುಮ್ಮನೆ ತಲೆಯಾಡಿಸಿದರು.... ನಾನು ಹೊರಗೆ ಬರುತ್ತಾ ಇರುವಾಗ " ಅವರನ್ನು ಹಾಗೆ ಕಳಿಸಬೇಡಿ, ನನ್ನ ಹತ್ತಿರ ಕಳಿಸಿ.... ಸ್ವಲ್ಪ ಮಾತನಾಡಬೇಕು ಅವರಲ್ಲಿ" ಎಂದಿದ್ದರು..... ನನಗೆ ಗೊತ್ತಿತ್ತು , ಅವರ ಹತ್ತಿರ ಮಾತನಾಡಲಿಕ್ಕೆ ಏನಿದೆ ಎನ್ನುವುದು.... ನಾನು ’ ಆಯ್ತು ಸರ್’ ಎಂದಿದ್ದೆ.....

   ಸ್ವಲ್ಪ ಹೊತ್ತಿನಲ್ಲೇ ಆತ ಬಂದಿದ್ದ.... ನನ್ನ ಹತ್ತಿರ ಬಂದು ಫೈಲ್ ಪಡೆದ ಆತ... ನನ್ನ ಕೈಯಲ್ಲಿ ಒಂದು ಕವರ್ ಕೊಟ್ಟ.... ’ ಏನೂ ಬೇಡ’ ಎಂದೆ..... ಆತ " ನನಗೆ ಗೊತ್ತು ಸರ್, ನೀವು ಏನೂ ತೆಗೆದುಕೊಳ್ಳುವುದಿಲ್ಲ ಎಂದು.. ನಿಮ್ಮ ಮಗಳ ಮದುವೆಗೆ ಏನಾದರೂ ಸಹಾಯ ಆಗತ್ತೆ ಸರ್... ಇದು ನಾನು ಪ್ರೀತಿಯಿಂದ ಕೊಡುತ್ತಿರುವುದು... ನೀವು ಹೆದರಿಸಿ ತೆಗೆದುಕೊಳ್ಳುತ್ತಿರುವುದಲ್ಲ..... ಇದು ತಪ್ಪಲ್ಲ ಸರ್...." ಎಂದರು.... ಮನೆಯಲ್ಲಿದ್ದ ಖರ್ಚು ನೆನಪಾಯಿತು...ಇಷ್ಟು ವರ್ಷ ನನ್ನ ನಿಯತ್ತಿನ ಕೆಲಸ, ಇವತ್ತಿನ ತುರ್ತು ಅವಶ್ಯಕತೆಯ ಮುಂದೆ ಗೌಣವಾಯಿತು..... ಕೈಲಿದ್ದ ಕವರ್ ನನ್ನ ಕೈಚೀಲ ಸೇರಿತು..... ಆತ ಖುಶಿಯಿಂದ ನನ್ನ ಮೇಲಧಿಕಾರಿಯನ್ನು ಭೇಟಿಯಾಗಲು ಹೊರಟ.... 

   ನಾನು ನನ್ನ ಕೆಲಸದಲ್ಲಿ ಮುಳುಗಿದೆ.... ಆಫೀಸಿನ ಹೊರಗಡೆ ಗೌಜಿ ಕೇಳಿಸುತ್ತಿತ್ತು..... ಹತ್ತು ಜನ ಒಳಗಡೆ ಬಂದರು... ಸೀದಾ ನನ್ನ ಮೇಲಧಿಕಾರಿಯ ಕೊಠಡಿಗೆ ಹೊಕ್ಕರು... ಅವರಲ್ಲಿ ಇಬ್ಬರು ಹೊರಗೆ ಬಂದು ನನ್ನ ಟೇಬಲ್ ಹುಡುಕುತ್ತಿದ್ದರು.... ನಾನು "ಏನು ಬೇಕು ನಿಮಗೆ, ಯಾರು ನೀವು.." ಕೇಳಿದೆ....  ಅವರು ಕೂಲ್ ಆಗಿ " ವಿಶ್ವಾಯುಕ್ತ  " ಎಂದರು... ಬೆನ್ನ ಹಿಂದೆ ಬೆವರಿಳಿಯುತ್ತಿತ್ತು... ಎಂದೂ ಹಣ ತೆಗೆದುಕೊಳ್ಳದ ನಾನು ಇವತ್ತು ಜಾರಿ ಬಿದ್ದಿದ್ದೆ... ದೇವರನ್ನು ಪ್ರಾರ್ಥಿಸುತ್ತಿದ್ದೆ.... ನನ್ನ ಟೇಬಲ್ ನಲ್ಲಿ ಏನೂ ಸಿಗಲಿಲ್ಲ....ಏನೂ ಇರಲಿಲ್ಲ ಕೂಡ..... ಆತ ನನ್ನ ಪಕ್ಕದ ಟೇಬಲ್ ಕಡೆ ಹೋದ... ನಾನು ಬಚಾವಾದೆ ಎನಿಸಿತು.... 

   ನನ್ನ ಮೇಲಧಿಕಾರಿ ಕೊಠಡಿಗೆ ಹೋದವರು ಹೊರಕ್ಕೆ ಬಂದರು....ನನ್ನ ಮೇಲಧಿಕಾರಿಯನ್ನು ಬಂಧಿಸಿದ್ದರು.... ನನಗೆ ಹಣ ಕೊಟ್ಟವನೇ ದೂರು ನೀಡಿದ್ದನಂತೆ.... ಆತನೂ ಅವರ ಪಕ್ಕದಲ್ಲಿದ್ದ.... ಆತನ ಮುಖದಲ್ಲಿ ನಗು ಇತ್ತು.... ವಿಶ್ವಯುಕ್ತದ ಹಿರಿಯ ಅಧಿಕಾರಿ ಅವರ ಕಿರಿಯ ಅಧಿಕಾರಿಯನ್ನು ಕರೆದು ಕೇಳಿದ.." ಇಲ್ಲೇನಾದರು ಸಿಕ್ಕಿತಾ...?" ಅವರು ’’ಇಲ್ಲಾ ಸಾರ್, ಏನೂ ಇಲ್ಲ’ ಅಂದರು.... ಆತ "ಎಲ್ಲಾ ಬ್ಯಾಗ್ ಗಳನ್ನು ಚೆಕ್ ಮಾಡಿದ್ರಾ..?" ಕೇಳಿದರು ಆತ.... ಅವರ ಕಣ್ಣು ನನ್ನ ಬ್ಯಾಗ್ ಮೇಲೆ ಬಿತ್ತು.... ನನ್ನ ಬ್ಯಾಗನ್ನು ಎಳೆದು ಬಿಚ್ಚಿದರು... ನನ್ನ ಉಸಿರು ಸಿಕ್ಕಿಹಾಕಿಕೊಂಡ ಹಾಗಾಯಿತು... ನನ್ನ ಬ್ಯಾಗಿನಲ್ಲಿ ಇದ್ದ ಕವರ್ ತೆಗೆದು ಅದರಲ್ಲಿದ್ದ ಹಣ ತೆಗೆದರು.... "ಇದು ಯಾರು ಕೊಟ್ಟಿದ್ದು ...?" ಕೇಳಿದರು.... ನನ್ನ ಜೀವ ಬಾಯಿಗೆ ಬಂದಿತ್ತು....."ನನ್ನದೇ ಸರ್... ಮನೆಯಿಂದ ತಂದಿದ್ದು...." ಎಂದೆ... ನಾಲಿಗೆಯ ಪಸೆ ಆರಿತ್ತು... "ಹಣ ಎಷ್ಟಿದೆ ಇದರಲ್ಲಿ..?" ನನ್ನ ಎದೆ ಬಡಿತ ಒಂದು ಕ್ಷಣ ನಿಂತೇ ಬಿಟ್ಟಿತು.... ಆತ ಕೊಟ್ಟ ಕವರನಲ್ಲಿ ಎಷ್ಟಿದೆ ಅಂತ ನೋಡದೆ ತೆಗೆದುಕೊಂಡಿದ್ದೆ... ನನ್ನ ಬಾಯಿ ಹೊರಳಲಿಲ್ಲ...ಏನಂತ ಹೇಳಲಿ.... ಎಷ್ಟಿದೆ ಅಂತ ಹೇಳಲಿ.... ಬಾಯಿ ತೆರೆಯುವವನಿದ್ದೆ... ಅಷ್ಟರಲ್ಲೇ ಆತ ನನಗೆ ಕವರ್ ಕೊಟ್ಟವರಲ್ಲಿ ಕೇಳಿದ "ಇವರಿಗೂ ಕೊಟ್ಟಿದ್ದೀರೇನ್ರಿ..? ಈ ಕವರ್ ನಿಮ್ಮದೇನಾ.....? ನೀವೇ ಕೊಟ್ಟಿದ್ದಾ..?" 

     ನಾನು ಆತನ ಮುಖವನ್ನೇ ನೋಡುತ್ತಿದ್ದೆ... ಮರಣದಂಡಣೆ ಶಿಕ್ಷೆ ಕೊಡುವ ನ್ಯಾಯಾಧೀಶನ ಸ್ಥಾನ ಆತನದಾಗಿತ್ತು ನನ್ನ ಪಾಲಿಗೆ.... ಆತ ಸಾವಧಾನವಾಗಿ ನನ್ನ ಕಡೆ ತಿರುಗಿದ.... "ಇಲ್ಲಾ ಸಾರ್, ನಾನು ಇವರಿಗೆ ಕೊಡಲಿಲ್ಲ.... ಇವರು ತುಂಬಾ ಪ್ರಾಮಾಣಿಕರು ಸಾರ್" ಎಂದ... ನನಗೆ ಹೋದ ಪ್ರಾಣ ವಾಪಸ್ ಬಂದ ಅನುಭವ... ಆತನೆಡೆಗೆ ಭಕ್ತಿ ಭಾವದಿಂದ ನೋಡಿದೆ.... ಆತ ನನ್ನ ಪಾಲಿಗೆ ದೇವರಾಗಿ ಬಿಟ್ಟಿದ್ದ... ಅಷ್ಟರಲ್ಲೇ ವಿಶ್ವಾಯುಕ್ತ ಹಿರಿಯ ಅಧಿಕಾರಿ ” ಅವರು ಪ್ರಾಮಾಣಿಕರೋ  ಅಲ್ಲವೋ ಅಂದ ನಿರ್ಧಾರ ಮಾಡಬೇಕಾದವರು ನಾವು....ನೀವಲ್ಲ.... ಬನ್ನಿ ಇಲ್ಲಿ.... ಇದನ್ನೂ ಸೀಝ್ ಮಾಡಿ" ಎಂದವರೇ ಆ ಕವರ್ ನ್ನು ತಮ್ಮ ಕಿರಿಯ ಅಧಿಕಾರಿಗೆ ಹಸ್ತಾಂತರಿಸಿದರು..... ನನ್ನ ಪರಿಸ್ಥಿತಿ ಯಾರಿಗೂ ಬೇಡವಾಗಿತ್ತು... ಅಧಿಕಾರಿಗಳು ಮಹಜರ್ ಬರೆದು "ನಮ್ಮ ಆಫೀಸಿಗೆ ಬಂದು ಹೋಗಿ, ಮುಂದಿನ ಕೆಲಸಗಳು ಬೇಗನೇ ಮುಗಿಸಬೇಕು" ಎಂದು ಹೇಳುತ್ತಲೇ ಹೊರಟರು... ನಾನು ಅವರ ಹಿಂದೆಯೇ ಓಡಿದೆ.... ಅವರ ಜೀಪ್ ಧೂಳೆಬ್ಬಿಸುತ್ತಾ ಹೊರಟೇ ಹೋಯಿತು.... 
                                                                                                                     
        ಮಾರನೇ ದಿನ ಬೆಳಿಗ್ಗೆಯೆ ವಿಶ್ವಾಯುಕ್ತ ಆಫೀಸಿಗೆ ಹೋದೆ... ಇನ್ನೂ ಯಾರೂ ಬಂದಿರಲಿಲ್ಲ... ಅಲ್ಲೇ ಇದ್ದ ಖಾಲಿ ಖುರ್ಚಿ ಮೇಲೆ ಕುಳಿತೆ... ನಮ್ಮ ಆಫೀಸಿನ ಮೇಲೆ ದಾಳಿ ಮಾಡಿದ ಅಧಿಕಾರಿ ಬರುತ್ತಿದ್ದ.. ನಾನು ಅವನತ್ತಲೇ ಓಡಿದೆ.... ಆತ ನನ್ನನ್ನು ನೋಡಿ ನಕ್ಕ... ಅವಮಾನ ಎನ್ನಿಸಿತು.. ನಿವ್ರತ್ತಿಗೆ ಎರಡು ತಿಂಗಳಿರುವಾಗ ಪುಡಿಗಾಸಿಗೆ ಆಶೆಪಟ್ಟು , ಸಿಕ್ಕಿಬಿದ್ದು, ಇಲ್ಲಿಗೆ ಬರುವ ದರ್ದು ಇತ್ತಾ ಎನಿಸಿತು.... ಅದಕ್ಕೆಲ್ಲಾ ಯೋಚಿಸುವ ಹೊತ್ತು ಇದಲ್ಲ ಎನಿಸಿ ಆತನ ಹಿಂದೆಯೇ ಹೋದೆ... ಆತ ತನ್ನ ರೂಮಿಗೆ ಹೋದ , ನನಗೂ ಒಳಗೆ ಬರಲು ಸನ್ನೆ ಮಾಡಿದ... ನಾನು ಅವರ ಎದುರಿಗೆ ಕುಳಿತೆ...

    "ಏನು ನಿಮ್ಮ ಕಥೆ ಹೇಳಿ... ಸರಕಾರ ನಿಮಗೆ ಸಂಬಳ ಕೊಡತ್ತಲ್ವಾ..? ಆದ್ರೂ ಯಾಕೆ ಎಂಜಲು ಕಾಸಿಗೆ ಕೈಯೊಡ್ಡುತ್ತೀರಾ...? ಈಗ ಜೈಲಿಗೆ ಹೋಗಬೇಕಾಗಿ ಬಂದಾಗ ಕಾಲು ಹಿಡಿಲಿಕ್ಕೆ ಬರ್ತೀರಾ.."  ನನಗೆ ಇವರ ಮೇಲೆ ನಂಬಿಕೆ ಬಂತು.. ನನ್ನ ನಿಜ ಕಥೆ ಇವರಿಗೆ ಹೇಳಿಕೊಂಡರೆ ನನಗೆ ಸಹಾಯ ಮಾಡಬಹುದು ಎನಿಸಿತು... ನನ್ನ ಎಲ್ಲಾ ಕಥೆಯನ್ನೂ, ಎಲ್ಲೂ ತಪ್ಪದೇ ಹೇಳಿದೆ... ಆತ ಜೋರಾಗಿ ನಗಾಡಿದ.... ನನಗೆ ಪಿಚ್ಚೆನಿಸಿತು.... ಈತ ನನ್ನನ್ನು ನಂಬಿದರಾ ಅಥವಾ ನನ್ನ ಪರಿಸ್ಥಿತಿ ನೋಡಿ ನಗುತ್ತಿದ್ದಾರಾ ಎಂದು ತಿಳಿಯಲಿಲ್ಲ... 

  "ನೀವೇನ್ ಕಾಗಕ್ಕ ಗೂಬಕ್ಕನ ಕಥೆ ಹೇಳ್ತಾ ಇದೀರಾ ನಂಗೆ... ನಾನಿದನ್ನ ನಂಬಬೇಕಾ..? ನಿಮ್ಮ ಇಲಾಖೆಯಲ್ಲಿ ನಡೆಯುವಷ್ಟು ಭ್ರಷ್ಟಾಚಾರ ಇನ್ನೆಲ್ಲೂ ನಡೆಯಲ್ಲ.. ನೀವೆಲ್ಲಾ ಮನೆ ಮೇಲೆ ಮನೆ ಕಟ್ಟಿಸಿರ್ತೀರಾ ಅಲ್ವಾ...? ನಾವು ನಿಮ್ಮನ್ನು ಹಿಡಿದಾಗ ಸತ್ಯ ಹರಿಶ್ಚಂದ್ರನ ಪೋಸು ಕೊಡ್ತೀರಾ..ನಿಮ್ಮಂಥವರನ್ನು ಎಷ್ಟೋ ಜನರನ್ನ ನೋಡಿದ್ದೀನಿ ನಾನು...." ಕೂಗಲಿಕ್ಕೆ ಶುರು ಮಾಡಿದ ಆತ... ನನಗೆ ಅಳುವೇ ಬಂದಿತ್ತು... " ಸಾರ್ ನನ್ನ ನಿವ್ರತ್ತಿಗೆ ಇನ್ನು ಎರಡೇ ತಿಂಗಳಿದೆ... ಈಗ ಈ ಕೇಸಿನಲ್ಲಿ ಸಿಕ್ಕಿದರೆ ನನ್ನ ಪಿಂಚಣಿಗೆ , ಭವಿಷ್ಯನಿಧಿಗೆ ಎಲ್ಲದಕ್ಕೂ ತೊಂದರೆಯಾಗತ್ತೆ.. ದಯವಿಟ್ಟು ಯಾರನ್ನಾದರೂ ವಿಚಾರಿಸಿ ನನ್ನ ಬಗ್ಗೆ... ಅದರಲ್ಲೂ ನನ್ನ ಬಗ್ಗೆ ಯಾರೂ ನಿಮಗೆ ದೂರೇ ಕೊಟ್ಟಿಲ್ಲ.. ಆದರೂ ನನ್ನನ್ನ ಈ ಕೇಸಿನಲ್ಲಿ ಸಿಕ್ಕಿಸಿದ್ದೀರಾ ಸರ್..." ಬೇಡುವ ದನಿಯಲ್ಲಿ ಹೇಳಿದೆ.... 

   ಆತ  ಖುರ್ಚಿ ಮುಂದೆ ತಂದ... ನನ್ನಲ್ಲೇನೋ ಆಸೆ ಹುಟ್ಟಿತು... ಆತ ಸಣ್ಣ ದನಿಯಲ್ಲಿ " ನಿಮ್ಮನ್ನು ಈ ಕೇಸಿನಲ್ಲಿ ಬಿಡುತ್ತೇನೆ, ನನಗೆ ಒಂದು ಲಕ್ಷ ಕೊಡಿ" ಪಕ್ಕದಲ್ಲಿ ಬಾಂಬ್ ಬಿದ್ದ ಹಾಗಾಯಿತು... ಯಾರನ್ನು ನಾವು ನ್ಯಾಯ, ಸತ್ಯ ಕಾಪಾಡುತ್ತಾರೆ ಎಂದು ನಂಬಿದ್ದೇವೆಯೋ , ಅವರೇ ಹಣಕ್ಕಾಗಿ ಸತ್ಯವನ್ನು, ನ್ಯಾಯವನ್ನು ಮಾರುತ್ತಾರೆ ಎಂದೆಣಿಸಿದಾಗ ಆದ ಆಘಾತ ನನಗಾಗಿತ್ತು... ನನಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯ್ತು... " ಏನ್ ಹೇಳ್ತಾ ಇದೀರಾ ಸರ್, ನನ್ನದಲ್ಲದ ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲು ನಾನು ನಿಮಗೆ ಹಣ ಕೊಡಬೇಕಾ..? ನನ್ನ ಮಗಳ ಮದುವೆ ಇದೆ ಮುಂದಿನ ತಿಂಗಳು.. ನಿಮಗೆ ನನ್ನ ಕೈ ಚೀಲದಲ್ಲಿ ಸಿಕ್ಕ ಹಣ ನೀವೇ ತೆಗೆದುಕೊಂಡು ಬಿಡಿ.. ಎಷ್ಟಿದೆಯೆಂದೂ ನೋಡಲಿಲ್ಲ ನಾನು... ನೀವು ಹೇಳಿದ್ದಷ್ಟು ಕೊಡಲು ನನ್ನಲ್ಲಿಲ್ಲ ... ಸ್ವಲ್ಪ ಹೊತ್ತು ಮೊದಲು ನನಗೆ ಬೋಧನೆ ಮಾಡಿದ ತಾವು ಈಗ ಅದರ ವಿರುದ್ಧ ಮಾತನಾಡುತ್ತಾ ಇದ್ದೀರಲ್ಲ ಸರ್..? " ಎಂದೆ ಮೆತ್ತಗೆ...

   ಆತ " ಒಳ್ಳೆತನ ಇರೋದು ಬೋಧನೆ ಮಾಡೊದಕ್ಕೆ ಮಾತ್ರ... ನೀವು ಮಾತ್ರ ನಿಮ್ಮ ಇಲಾಖೆಯಲ್ಲಿ ಬರ್ಜರಿಯಾಗಿ ಕುಳಿತು ಬಿರಿಯಾನಿ ತಿನ್ನಿ... ನಾವು ಮಾತ್ರ ಇಲ್ಲೇ ಇದ್ದು ಕೊಡುವ ಸಂಬಳದಲ್ಲಿ ಗಟ್ಟಿ ರೊಟ್ಟಿ ತಿನ್ನಿ ಅನ್ನುತ್ತೀರಾ... ನಾವು ಸನ್ಯಾಸಿಗಳಲ್ಲ... ನಮಗೂ ಆಶೆಗಳಿರುತ್ತವೆ... ನಾನು ಹೇಳಿದ ಪ್ರಕಾರ ನೀವು ಕೊಟ್ಟರೆ ನಿಮ್ಮ ಹೆಸರನ್ನು ಈ ಕೇಸಿನಿಂದ ಬಿಡುತ್ತೇನೆ... ಇಲ್ಲದಿದ್ದರೆ ನಿಮಗೆ ಬಿಟ್ಟಿದ್ದು" ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು... ನನಗೇನೂ ತೋಚಲಿಲ್ಲ... " ಯೋಚಿಸಿ ಬರುತ್ತೇನೆ ಸರ್" ಎಂದು ಹೇಳಿ ಹೊರಬಿದ್ದೆ.. 

    ಯೋಚಿಸಿ ಬರುತ್ತೇನೆ ಅಂತೇನೋ ಹೇಳಿದ್ದೆ ಆದರೆ ಅವರಿಗೆ ಕೊಡಲು ಹಣವಾಗಲೀ, ಅವರ ವಿರುದ್ದ ದೂರು ಕೊಡಲು ಅವರ ಮೇಲಧಿಕಾರಿಯ ಹುದ್ದೆ ಖಾಲಿ ಇತ್ತು.... ಈ ಪ್ರಕರಣ ನಡೆದು ಎರಡೇ ದಿನದಲ್ಲಿ ನನ್ನ ಮಗಳ ನಿಷ್ಚಿತಾರ್ಥ ಇದ್ದುದರಿಂದ ನನಗೆ ಮತ್ತೆ ಆ ಅಧಿಕಾರಿಯನ್ನು ಭೇಟಿ ಆಗಲು ಅವಕಾಶ ಸಿಗಲಿಲ್ಲ... ಆದರೆ.... ಮಾರನೇ ದಿನ ನನಗೆ ಖುಶಿ ಕೊಡುವ ಸುದ್ದಿ ಸಿಕ್ಕಿತು... 

    ನನ್ನಿಂದ ಹಣ ಕೇಳಿದ ಅಧಿಕಾರಿಯ ಮೇಲಧಿಕಾರಿ ನಿಯುಕ್ತಿ ಆಗಿತ್ತು ಮತ್ತೆ ಅದೇ ದಿನ ನನ್ನ ಹತ್ತಿರ ಹಣ ಕೇಳಿದ ಅಧಿಕಾರಿಯ ಮೇಲೆ ದಾಳಿ ನಡೆದಿತ್ತು... ಅವರ ವಿರುದ್ದ ಇದೇ ರೀತಿಯ ತುಂಬಾ ದೂರುಗಳು ಇದ್ದವಂತೆ.... ನಾನೂ ಸಹ ಈ ಕೇಸಿನ ಮೇಲೆ ಆಸೆಯನ್ನೇ ಬಿಟ್ಟಿದ್ದೆ... ಎಂದಾದರೂ ಸತ್ಯ ಗೆದ್ದೇ ಗೆಲ್ಲತ್ತೆ ಎನ್ನುವ ವಿಶ್ವಾಸದ ಜೊತೆ ಹೋರಾಡುವ ಶಕ್ತಿಯೂ ಕುಂದಿತ್ತು ಎನ್ನಿ... ಆ ಅಧಿಕಾರಿಯ ಮೇಲೆ ದಾಳಿ ನಡೆದ ಮರುದಿನವೇ ನಾನು ವಿಶ್ವಾಯುಕ್ತ ಕಚೇರಿಯ ಬಾಗಿಲಿಗೆ ಬಂದಿದ್ದೆ... ಮೇಲಧಿಕಾರಿಗಾಗಿ ಕಾದು ಕುಳಿತಿದ್ದೆ....
                             
                       **************************

     ಬೂಟಿನ ’ಟಕ್ ಟಕ್’ ಸದ್ದು ನನ್ನನ್ನು ವಾಸ್ತವಕ್ಕೆ ಕರೆ ತಂದಿತ್ತು...  ಬರುತ್ತಿದ್ದ 
ವ್ಯಕ್ತಿಯನ್ನು ಪೇಪರ್ ನಲ್ಲಿ ಮತ್ತು ಟಿ.ವಿ ಯಲ್ಲಿ ನೋಡಿದ್ದೆ.. ಆವರೇ ವಿಶ್ವಯುಕ್ತದ
ಮೇಲಧಿಕಾರಿಯಾಗಿದ್ದರು... ಅವರು ಕಚೇರಿಯ ಕೋಣೆಯನ್ನು ಹೊಕ್ಕೊಡನೆಯೇ ನಾನು ಅವರ ಸಹಾಯಕನಿಗೆ ಹೇಳಿ ಒಳ ಹೋದೆ... ನನ್ನನ್ನು ನೋಡಿ ಅವರು ಕುಳಿತುಕೊಳ್ಳಲು ಹೇಳಿದರು... ನಾನು ಕುಳಿತುಕೊಂಡೆ... ನನ್ನೆಲ್ಲ ಕಥೆ ಹೇಳಿದೆ... ಅವರಿಗೆ ನನ್ನ ಮೇಲೆ ನಂಬಿಕೆ ಬಂತು ಅನಿಸತ್ತೆ... ಅವರ ಸಹಾಯಕನಿಗೆ ನನ್ನ ವಿರುದ್ದದ ಕಡತ ತರಲು ಹೇಳಿದರು... ಅದನ್ನ ಬಿಚ್ಚಿ ಓದಿದರು.. " ರಾಯರೇ, ನಿಮ್ಮ ವಿರುದ್ಧ ಆಗಲೇ ಎಫ್. ಐ. ಆರ್. ಫೈಲ್ ಆಗಿದೆ... ಈಗ ಏನೂ ಮಾಡುವ ಹಾಗಿಲ್ಲ...ನೀವು ಕೋರ್ಟ್ ಗೆ ಹೋಗಿ  " ಎಂದರು ಅವರು... ನನಗೆ ಏನೂ ಹೇಳಲು ತೋಚಲಿಲ್ಲ... ಆದರೂ ಧೈರ್ಯ ಮಾಡಿ ಹೇಳಿದೆ...

   " ಸರ್, ಅವರು ಮಾಡಿದ್ದು ಸುಳ್ಳು ಕೇಸ್ ಮತ್ತು ಅದನ್ನು ಮಾಡಿದ್ದು ಸಹ ಸರಿಯಾದ ವ್ಯಕ್ತಿ ಅಲ್ಲ.... ಆತ ತನ್ನ ಲಾಭ ನೋಡಿಕೊಂಡು ದೂರು ದಾಖಲಿಸುತ್ತಿದ್ದ.. ಅವರಿಗೆ ಹಣ ಕೊಟ್ಟಿದ್ದಿದ್ದರೆ ನನ್ನ ವಿರುದ್ದದ ದೂರನ್ನು ಬಿಡುತ್ತಿದ್ದ.. ಆತನೇ ಸರಿ ಇರದಿದ್ದ ಮೇಲೆ ಆತನ ಕೇಸ್ ಹೇಗೆ ಸಾಚಾ ಆಗಿರತ್ತೆ ಸರ್..?” ಎಂದೆ ನಿಧಾನವಾಗಿ... ಅವರಿಗೂ ಮುಜುಗರವಾಯಿತು ಅನಿಸತ್ತೆ... ಅವರು ಹೇಳಿದ ಮಾತು ನಮ್ಮ ವ್ಯವಸ್ಥೆಯ ಮುಖಕ್ಕೆ ಹೊಡೆದಂತಿತ್ತು.. " ಇಲ್ಲಿ ದಾಖಲಾಗುವ ಕೇಸು, ವಿಧಾನಸಭೆಯಲ್ಲಿ ರಚಿಸಲ್ಪಡುವ ಕಾನೂನು ಎಷ್ಟೇ ಅಕ್ರಮ ಮಾಡಿದ ವ್ಯಕ್ತಿಯಿಂದಲೇ ಆಗಿರಬಹುದು.... ಅದು ಸಕ್ರಮವೇ ಆಗಿರತ್ತೆ.... "

ನಾನು ತಲೆ ತಗ್ಗಿಸಿದೆ.... ನನ್ನ ದುರದ್ರಷ್ಟಕ್ಕೊ... ಮಾಡಿದ ತಪ್ಪಿಗೋ.... ತಿಳಿಯಲಿಲ್ಲ...  


(ಇದು ಕಲ್ಪನೆ ಅಷ್ಟೆ...)