Nov 7, 2012

ಮಾನವೀಯತೆ.......???



    ಇವತ್ತು ಸೊಸೆ ಕೊಟ್ಟ ದುಡ್ಡಲ್ಲಿ ಹೇಗಾದರೂ ಮಾಡಿ ಉಳಿಸಲೇ ಬೇಕಿತ್ತು... ಐವತ್ತು ರುಪಾಯಿ ಉಳಿಸಲೇ ಬೇಕಿತ್ತು... ದಿನಸಿ ಸಲುವಾಗಿ ಬಂದಿದ್ದೆ, ಕೆಲವೊಂದು ಸಾಮಾನು ಬೇಕೆಂದೇ ತೆಗೆದುಕೊಳ್ಳಲಿಲ್ಲ.... ನಾಳಿನ ಪೂಜೆಗಾಗಿ ಎಲ್ಲಾ ವಸ್ತುಗಳನ್ನೂ ಕೊಂಡೆ.... ಐವತ್ತೈದು ರುಪಾಯಿ ಉಳಿಯಿತು.... ಸೈಕಲ್ ಹತ್ತಿದೆ. ಸೈಕಲ್ ನ ಇಕ್ಬಾಲ್ ಸಾಬನ ಚಿಕನ್ ಸ್ಟಾಲ್ ಕಡೆ ತಿರುಗಿಸಿದೆ.... ಇಕ್ಬಾಲ್ ಸಾಬ್ ನನ್ನ ನೋಡಿ ದೊಡ್ಡ ಕಣ್ಣು ಮಾಡಿದ, ’ಇದೇನಪ್ಪಾ ಪುಳ್ ಚಾರ್ ಮುದುಕನಿಗೆ ಇಲ್ಲೇನು ಕೆಲಸ’ ಎನ್ನುವ ಹಾಗಿತ್ತು ಅವನ ಮುಖಭಾಷೆ..... ನಾನು ಹೆದರುತ್ತಲೇ ಆ ಕಡೆ ಈ ಕಡೆ ನೋಡುತ್ತಾ ಅವನ ಅಂಗಡಿಯ ಒಳಗಡೆ ಹೋದೆ.... ಅಲ್ಲಿನ ಕೆಟ್ಟ ವಾಸನೆ ವಾಕರಿಕೆ ಬಂದರೂ ಸಹಿಸಿಕೊಂಡೆ..... "ಏನು ಸಾರ್ ಈ ಕಡೆ..? ಏನು ಬೇಕು..? " ಕೇಳಿದ ಇಕ್ಬಾಲ್ ಸಾಬ್....  ನಾನು ಗಂಬೀರವಾಗಿಯೇ " ಅರ್ಧ ಕೇಜಿ ಕೋಳಿ ಮಾಂಸ" ಎಂದೆ...... 

     ಆತ " ಯಾರಿಗೆ ಸಾರ್ ಇದು..? ನೀವಂತೂ ತಿನ್ನುವುದಿಲ್ಲ. ಇಲ್ಲಾ ನೀವೂ ತಿನ್ನಲೂ ತಿನ್ನಲು ಶುರು ಮಾಡಿದ್ರಾ..?  ಓ.. ನಿಮ್ಮ ಪಕ್ಕದ ಮನೆಯವರಿಗಾ..? " ಕೇಳಿದ...... ಈತ ಪ್ರಶ್ನೆ ಕೇಳುತ್ತಿದ್ದಾನಾ ಅಥವ ಉತ್ತರ ಹೇಳುತ್ತಿದ್ದಾನಾ ತಿಳಿಯಲಿಲ್ಲ..... ನಾನು"ಹೌದು" ಎಂದೆ,,,, ಆದರೆ ಆತನ ಯಾವ ಪ್ರಶ್ನೆಗೆ ಎನ್ನುವ ಉತ್ತರ ನನಗೂ ತಿಳಿಯಲಿಲ್ಲ..... ಮೊದಲೇ ಕಟ್ ಮಾಡಿಟ್ಟ ಮಾಂಸವನ್ನ ಆತ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಕೊಟ್ಟ..... ಜೀವನದಲ್ಲಿ ಎಂದಿಗೂ ಮುಟ್ಟದ ವಸ್ತುವನ್ನು ಇವತ್ತು ಕೈಯಲ್ಲಿ ಹಿಡಿದಿದ್ದೆ...... ಮನಸ್ಸು ದ್ರಢವಾಗಿತ್ತು.....

      
      ಮಾಂಸ ಇದ್ದ ಪ್ಲಾಸ್ಟಿಕ್ ಚೀಲವನ್ನು ಸೈಕಲ್ ಹ್ಯಾಂಡಲ್ ಗೆ ನೇತಾಡಿಸಿ ಕೊಂಡು, ಸೊಸೆ ಹೇಳಿದ ದಿನಸಿ ಸಾಮಾನನ್ನು ಹಿಂದಿನ ಕ್ಯಾರಿಯರ್ ಗೆ ಸಿಕ್ಕಿಸಿ ಸೈಕಲ್ ತುಳಿದೆ...... ಸರಕಾರಿ ನೌಕರಿಯಿಂದ ನಿವ್ರತ್ತನಾದರೂ ದೇಹ ಗಟ್ಟಿಯಿತ್ತು ಅದಕ್ಕೆ ಈ ಸೈಕಲ್ ತುಳಿದಿದ್ದೂ ಕಾರಣ ಇರಬಹುದು...... ನಾನು ಮಾಡಿದ ಅಲ್ಪ ಸ್ವಲ್ಪ ಒಳ್ಳೆಯ ಕೆಲಸದಿಂದ ಈಗಲೂ ಕೆಲ ಜನರು ನನ್ನನ್ನು ಗೌರವಿಸುತ್ತಾರೆ..... ಸೈಕಲ್ ತುಳಿಯುತ್ತಲೇ ನನ್ನ ಕಣ್ಣು ಅವನ್ನು ಹುಡುಕುತ್ತಿತ್ತು...... ಈ ಕೋಳಿ ಮಾಂಸವನ್ನು ಅವಕ್ಕೆ ಹೇಗೆ ತಲುಪಿಸುವುದು ತಿಳಿಯುತ್ತಿರಲಿಲ್ಲ..... ಮನೆಗೆ ತೆಗೆದುಕೊಂಡು ಹೋದರೆ, ಮಗ ಸೊಸೆ ನನ್ನನ್ನು ಒಳಗಡೆ ಬಿಟ್ಟುಕೊಳ್ಳಲ್ಲ ಎಂದು ಗೊತ್ತಿತ್ತು.......

     ಆದರೆ ನನ್ನ ಮನಸ್ಸು ಗಟ್ಟಿಯಾಗಿತ್ತು ಏನಾದರೂ ಮಾಡಿ ಅನಿಸಿಕೊಂಡ ಕೆಲಸ ಮಾಡಬೇಕಿತ್ತು..... ಸೈಕಲ್ ನ್ನ ಕಂಪೌಂಡ್ ಹೊರಗಡೆನೇ ನಿಲ್ಲಿಸಿ ಸೊಸೆ ಹೇಳಿದ ಸಾಮಾನಿನ ಚೀಲ ತೆಗೆದುಕೊಂಡೆ..... ಕೋಳಿ ಮಾಂಸದ ಚೀಲ ಸುತ್ತಿ ಸುತ್ತಿ ಇನ್ನೊಂದು ಕೈಲಿ ಹಿಡಿದೆ...... ಬಾಗಿಲು ತೆರೆದೇ ಇತ್ತು, ಒಳಗೆ ಹೋಗಬೇಕು ಎನ್ನುವಾಗಲೇ ಸೊಸೆ ಮತ್ತು ಮಗ ಎದುರಿಗೇ ಬಂದ್ರು...... ನಾನು ಸಾಮಾನಿನ ಚೀಲ ಸೊಸೆ ಕೈಲಿಟ್ಟೆ...... ಅವರ ಕಣ್ಣು ನಾನು ತಂದ ಇನ್ನೊಂದು ಚೀಲದ ಮೇಲಿತ್ತು.

       ಸೊಸೆ ಮಾತ್ರ ನನ್ನನ್ನು ಕಣ್ಣೆತ್ತಿಯೂ ನೊಡುತ್ತಿರಲಿಲ್ಲ...... ಮೊದಲೆಲ್ಲಾ ತುಂಬಾ ಗೌರವದಿಂದ, ಪ್ರೀತಿಯಿಂದ ನೋಡುತ್ತಿದ್ದಳು....... ಆ ದಿನದ ನಂತರ ನನ್ನನ್ನು ಮಾತನಾಡಿಸುತ್ತಲೂ ಇರಲಿಲ್ಲ..... ಏನೇ ಕೆಲಸ ಇದ್ದರೂ ಮಗನೇ ಹೇಳುತ್ತಿದ್ದ..... ಮನೆಯಲ್ಲೂ ಹೆಚ್ಚಿಗೆ ಇರುತ್ತಿರಲಿಲ್ಲ ನಾನು..... ಬೇಗ ಹೊರಬೀಳಬೇಕಿತ್ತು ನನಗೆ..... ಇಲ್ಲೇ ಇದ್ದರೆ ಕೈಲಿದ್ದ ಚೀಲದ ಬಗ್ಗೆ ಕೇಳುತ್ತಾರೆ ಎನಿಸಿಕೊಂಡು ಹೊರಬಿದ್ದೆ....... ಮಗ " ಅಪ್ಪಾ ಎಲ್ಲಿಗೆ ಹೊರಟಿರಿ? ನಾಳಿನ ಪೂಜೆಗೆ ಎಲ್ಲಾ ಸಾಮಾನು ತಂದಿದ್ದೀರಾ ತಾನೆ? ಉಳಿದ ಹಣ ಎಲ್ಲಿ ? " ಎಂದ.... ನಾನು "ಹೌದು, ಎಲ್ಲಾ ತಂದಿದ್ದೇನೆ.... ಸ್ವಲ್ಪ ಹಣ ನನಗೆ ಖರ್ಚಾಯಿತು ..." ಎಂದೆ..... ’ಅಪ್ಪಾ , ಎಲ್ಲಿಗೆ ಹೋಗ್ತಾ ಇದೀರಾ.? ಕೈಯಲ್ಲಿ ಇರೋದು ಏನು.? ’ ಎಂದು ಮಗ ಕೇಳ್ತಾ ಇದ್ದ......

      ನಾನು ಗಡಿಬಿಡಿಯಿಂದ ಸೈಕಲ್ ಹತ್ತಿ ಪೆಡಲ್ ತುಳಿದೆ....... ಮನಸ್ಸು ದಾರಿ ಎಲ್ಲಿಗೆ ಎಂದು ನಿರ್ಧಾರ ಮಾಡಿಯಾಗಿತ್ತು......... ಊರ ಹೊರದಾರಿಯಲ್ಲಿದ್ದ ಮುನಿಯಮ್ಮನ ಮನೆ ಮುಂದೆ ಸೈಕಲ್ ನಿಲ್ಲಿಸಿ ಸೈಕಲ್ ಬೆಲ್ ಮಾಡಿದೆ...... ಆಕೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು..... ಗಂಡ ಸತ್ತಿದ್ದ....... ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು......... ಕೆಲಸ ಸಿಕ್ಕಿದ್ದು ನನ್ನಿಂದಲೇ ಅಂತ ಆಕೆಗೆ ನನ್ನ ಮೇಲೆ ಗೌರವ ಇತ್ತು....... ನನ್ನ ಸೈಕಲ್ ಬೆಲ್ ಕೇಳಿ ಆಕೆ ಹೊರಗೆ ಬಂದಳು....... "ಏನು ಬುದ್ದಿ, ಹೇಳಿ ಕಳಿಸಿದ್ರೆ ನಾನೇ ಬರ್ತಿದ್ನಲ್ಲಾ.... ಮನೆ ತಾವಾ ಏನಾದ್ರೂ ಕೆಲ್ಸ ಇತ್ತಾ..? ನಾಳೆ ಪೂಜೆಗಾಗಿ ಏನಾದ್ರೂ ಬೇಕಿತ್ರಾ.? "

     ಅವಳ ಪ್ರಶ್ನೆ ಮುಗಿದಿರಲಿಲ್ಲ, ನಾನು ಕೋಳಿ ಮಾಂಸದ ಚೀಲ ಅವಳ ಕೈಲಿಟ್ಟೆ. " ಘಮ ಘಮ ಎನ್ನುವ ಹಾಗೆ ಸಾರು ಮಾಡಿಡು." ಎಂದೆ...... ಆಕೆ ಚೀಲ ತೆರೆದು ನೋಡಿದಳು, ಆಕೆಯ ಮುಖ ಕೆಂಪಗಾಯಿತು........." ಏನ್ ಬುದ್ದಿ ನೀವು.? ಇನ್ನೂ ಅವುಗಳ ಮೇಲೆ ಪ್ರೀತಿ ಕಡಿಮೆಯಾಗಲಿಲ್ಲವಾ.? ಅವುಗಳು ಏನು ಮಾಡಿದ್ದವು ಎನ್ನುವ ನೆನಪು ಇಲ್ಲವಾ ನಿಮಗೆ.? ನಾಳೆ ವರ್ಷದ ಪೂಜೆ ಇಟ್ಟುಕೊಂಡು ನೀವು ಈ ಕೆಲ್ಸ ಮಾಡ್ತಾ ಇದ್ದೀರಲ್ಲಾ ಬುದ್ದೀ..?"........ ಅವಳು ವಟಗುಡುತ್ತಲೇ ಇದ್ದಳು... ನಾನು "ಒಂದು ಗಂಟೆ ಬಿಟ್ಟು ಬರುತ್ತೇನೆ, ರೆಡಿ ಮಾಡಿಡು" ಎಂದವನೇ ಪೆಡಲ್ ತುಳಿದೆ......

     ಸ್ವಲ್ಪ ದೂರ ಹೋಗುತ್ತಲೇ ಒಂದು ಪರಿಚಯದ ಮುಖ ಕಂಡಿತು...... ಸೈಕಲ್ ನಿಲ್ಲಿಸಿದೆ....... ಮುಖ ಪರಿಚಯ ಅಷ್ಟೇ ಇತ್ತು........ ಆತನೇ ಕೈ ಮುಗಿದ "ನಮಸ್ಕಾರ ಸರ್, ನಾಳಿನ ಸನ್ಮಾನ ಕಾರ್ಯಕ್ರಮ ನೆನಪಿದೆ ತಾನೆ.?"...... ಆಗ ನೆನಪಾಯ್ತು ನನಗೆ, ನಾಳೆ ಸನ್ಮಾನ ಕಾರ್ಯಕ್ರಮದ ವಿಷ್ಯ....... "ನಾಳೆ ಮಧ್ಯಾನ್ಹ ನನ್ನ ಮನೆಯಲ್ಲಿ ಪೂಜೆ ಇದೆ. ಬರೋದು ಕಷ್ಟ ಆಗಬಹುದು" ಎಂದೆ......... "ಇದ್ಯೇನ್ ಸಾರ್, ನಿಮಗೆ ಸನ್ಮಾನ ಮಾಡ್ತಾ ಇರೋರು ಈ ಊರಿನ ಎಮ್. ಎಲ್.ಎ ಸಾಹೇಬರು,ನಿಮಗೆ ಒಳ್ಳೆಯ ಹೆಸರು ಬರತ್ತೆ ಸರ್..... ಅದರಲ್ಲೂ ನಿಮ್ಮ ಮನೆ ಪೂಜೆ ಮಧ್ಯಾನ್ಹ ತಾನೆ?... ಸನ್ಮಾನ ಕಾರ್ಯಕ್ರಮ ಹನ್ನೊಂದಕ್ಕೆ ಮುಗಿದುಹೋಗತ್ತೆ ಸರ್..... ಬೆಳಿಗ್ಗೆ ನಿಮ್ಮ ಮನೆಗೆ ಕಾರು ಕಳಿಸ್ತೇನೆ ಸರ್" ಎಂದ ಆತ....... ನಾನು "ಆಯ್ತು, ಕಳ್ಸಿ ನೋಡೋಣ" ಎನ್ನುತ್ತಾ ಸೈಕಲ್ ತುಳಿದೆ........ ಕೋಳಿ ಸಾರು ರೆಡಿಯಾಗಿರಬಹುದು ಎಂದು ಮುನಿಯಮ್ಮನ ಮನೆ ಕಡೆ ಹೊರಟೆ......

     ನನ್ನ ಸೈಕಲ್ ಬೆಲ್ ಕೇಳಿ ಆಕೆ ಒಂದು ಟಿಫಿನ್ ಬಾಕ್ಸ್ ಹಿಡಿದು ಬಂದಳು...... ಮುಖದಲ್ಲಿ ಇನ್ನೂ ಸಿಟ್ಟಿತ್ತು ಎನಿಸತ್ತೆ....... ನಾನು "ನಾಳೆ ಬೆಳಿಗ್ಗೆ ಬೇಗನೇ ಬಾ..... ಕೆಲ್ಸ ಇದೆ ಮನೆಯಲ್ಲಿ" ಎಂದು ಟಿಫಿನ್ ಬಾಕ್ಸ್ ತೆಗೆದು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿದೆ..... ಮುನಿಯಮ್ಮ ಏನೂ ಮಾತಾಡಲಿಲ್ಲ..... ನಾನು ಮತ್ತೆ ಅವಳನ್ನು ಮಾತನಾಡಿಸುವ ಧೈರ್ಯ ಮಾಡಲಿಲ್ಲ...... ಮನೆ ಕಡೆ ಹೊರಟೆ..... ಮನೆ ತಲುಪಿದವನೇ ಟಿಫಿನ್ ಬಾಕ್ಸ್ ಇದ್ದ ಪ್ಲಾಸ್ಟಿಕ್ ಚೀಲವನ್ನು ಮನೆ ಹೊರಗೆ ಇದ್ದ ಗೂಡಿನಲ್ಲಿ ಇಡುವಾಗ ಮಗ ಸೊಸೆ ಇಬ್ಬರೂ ಹೊರಗೆ ಬಂದರು.....
 " ಏನಪ್ಪ ಅದು..? " ಕೇಳಿದ ಮಗ......
" ಏನಿಲ್ಲ, ಸುಮ್ನೆ" ಎಂದು ಬಾಕ್ಸ್ ಅಲ್ಲೇ ಇಟ್ಟೆ...... ಮಗನಿಗೆ ಗೊತ್ತಾಯ್ತು ಎನಿಸತ್ತೆ..... " ಅಪ್ಪಾ, ಇಷ್ಟೆಲ್ಲಾ ಆದ ಮೇಲೂ ನಿಮಗೆ ಅವುಗಳ ಮೇಲೆ ಕರುಣೇನಾ.?, ಏನು ಹೇಳಲಿ ಅಪ್ಪಾ ನಿಮಗೆ,,,,, ನಿಮಗೆ ಮನಸ್ಸು ಎಂಬುದೇ ಇಲ್ಲವಾ..?" ಎಂದವನೇ ಸೊಸೆಯನ್ನು ಕರೆದುಕೊಂಡು ಒಳಕ್ಕೆ ಹೋದ..... ಸೊಸೆಯ ಕಣ್ಣಲ್ಲಿ ನೀರಿತ್ತು..... ನಾನು ಸುಮ್ಮನೆ ಹೋಗಿ ನನ್ನ ರೂಮಿನಲ್ಲಿ ಮಲಗಿದೆ. ಊಟ ಮಾಡುವ ಮನಸ್ಸಿರಲಿಲ್ಲ......

    ಮಗ್ಗಲು  ಬದಲಿಸಿ ಬದಲಿಸಿ ಮಲಗಿದವನಿಗೆ ಯಾವಾಗ ನಿದ್ದೆ ಹತ್ತಿತ್ತೋ ತಿಳಿಯದು, ಎದ್ದಾಗ ಆರು ಗಂಟೆಯಾಗಿತ್ತು...... ಮುಖ ತೊಳೆದೆ...... ದೇವರಿಗೆ ದೀಪ ಹಚ್ಚಿದೆ...... ಅದೂ ಇದು ಕೆಲಸ ಮುಗಿಸಿದಾಗ ಗಂಟೆ ಎಂಟಾಯಿತು...... ಸ್ವಲ್ಪವೇ ಊಟ ಮಾಡಿ, ನನ್ನ ರೂಮಿನ ಮೂಲೆಯಲ್ಲಿದ್ದ  ಚಿಕ್ಕ ಕಾಗದದ ಪೊಟ್ಟಣ ಕಿಸೆಯಲ್ಲಿ ಹಾಕಿಕೊಂಡೆ..... ಹೊರಗೆ ಬರುವಾಗ ಮಗ ’ಎಲ್ಲಿಗೆ .?’ ಎನ್ನುವ ಹಾಗೆ ನೋಡಿದ..... ನಾನು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ...... ’ಮಗನೇ, ನೀನು ಒಂದು ವರ್ಷ ಪಟ್ಟ ನೋವಿಗೆ ಇಂದು ಕೊನೆ ಹಾಡುತ್ತೇನೆ.’ ಎಂದು ಮನಸ್ಸಿನಲ್ಲೇ ಎಂದುಕೊಂಡು ಹೊರಬಿದ್ದೆ...... ಟೈಮ್ ನೋಡಿದೆ, ಹತ್ತು ಗಂಟೆ.....  ಗೂಡಿನಲ್ಲಿ ಇಟ್ಟಿದ್ದ ಟಿಫಿನ್ ಬಾಕ್ಸ್ ತೆಗೆದುಕೊಂಡೆ..... ಸೈಕಲ್ ತುಳಿದೆ.....

        ಆ ಜಾಗಕ್ಕೆ ಸುಮಾರು ಅರ್ಧ ಘಂಟೆ ಸೈಕಲ್ ತುಳಿಯಬೇಕು..... ಯಾರೂ ಸಿಗಲಿಲ್ಲ ರಸ್ತೆಯಲ್ಲಿ..... ಅದೇ ತಿರುವು.... ಪಕ್ಕದಲ್ಲಿ ಕಸದ ತೊಟ್ಟಿ. ಸೈಕಲ್ ನಿಲ್ಲಿಸಿದೆ. ಬೆಲ್ ಮಾಡಿದೆ..... ಬಂತು ಸದ್ದು..... ಬೌವ್..ಬೌವ್... ಬಾಲ ಅಲ್ಲಾಡಿಸುತ್ತಾ ಬಂತು ಒಂದು ನಾಯಿ.... ಟಿಫಿನ್ ಬಾಕ್ಸ್ ಹೊರತೆಗೆದೆ..... ಒಂದು ತುಂಡನ್ನ ನಾಯಿಗೆ ಎಸೆದೆ.... "ಬೌವ್.. ಬೌವ್" ಜೋರಾಗಿ ಕೂಗಿತು ನಾಯಿ..... ಅದು ತನ್ನ ಸಹಪಾಟಿಗಳನ್ನು ಕರೆಯುತ್ತಿತ್ತು....  ನನಗೂ ಅದೇ ಬೇಕಿತ್ತು.... ನಾನು ಎಸೆದ ತುಂಡನ್ನ ಮೂಸಿದ ನಾಯಿ ನಾಲಿಗೆ ಹೊರಹಾಕಿ ನೆಕ್ಕಿತು.... ರುಚಿ ಆಗಿತ್ತು ಎನಿಸತ್ತೆ....ಇನ್ನೂ ಜೋರಾಗಿ ಬೊಗಳಿತು...... ಬೌವ್... ಬೌವ್... ಬೌವ್... ಅದೆಲ್ಲಿತ್ತೋ ನಾಯಿಯ ಹಿಂಡು..... ಓಡುತ್ತಾ ಬಂದವು..... ಅವೆಲ್ಲಾ ನನ್ನನ್ನೇ ಗುರುಗುಟ್ಟಿ ನೋಡಿದವು.....

     ನಾನು ಯಾವಾಗಲೂ ನಾಯಿಗೆ ಬಿಸ್ಕಿಟ್ ಹಾಕುತ್ತಿದ್ದೆ..... ಹಾಗಾಗಿ ನಾನು ಅವಕ್ಕೆ ಪರಿಚಿತ ಮುಖ...... ನನ್ನ ಕಣ್ಣು ಹುಡುಕುತ್ತಿತ್ತು..... ಎಲ್ಲಾ ನಾಯಿಯನ್ನೂ ಗಮನ ಇಟ್ಟು ನೋಡಿದೆ.... ಅವುಗಳ ಕಿರುಚಾಟ ಜೋರಾಗಿತ್ತು...... ನಾನು ಹುಡುಕುತ್ತಲೇ ಇದ್ದೆ...... ಆಗ ಬಂತು ಒಂದು ನಾಯಿ..... ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬೆಲ್ಟ್ ಇತ್ತು..... ಬಾಲ ಅಲ್ಲಾಡಿಸುತ್ತಾ ಬಂತು..... ನನ್ನ ಕೈ ಸಾವಕಾಶವಾಗಿ ಕಿಸೆಯಲ್ಲಿದ್ದ ಪೊಟ್ಟಣ ತೆಗೆಯಿತು...... ಪೊಟ್ಟಣ ಬಿಚ್ಚಿ ಕೋಳಿ ಸಾರಿಗೆ ಹಾಕಿ ಕಲಸಿದೆ..... ಕಲಸುತ್ತಾ ಇರುವಾಗ ನನ್ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು..... ಕಲಸಿದೆ ಕೋಳಿ ತುಂಡುಗಳನ್ನು ಒಂದೊಂದೇ ನಾಯಿಗಳ ಕಡೆ ಎಸೆದೆ..... ಮೊದಲು ಬಂದಿದ್ದೇ ಕೆಂಪು ಬೆಲ್ಟ್ ನಾಯಿ..... ನಂತರ ಗುಂಪಿನಲ್ಲಿದ್ದ ಎಲ್ಲಾ ನಾಯಿಗಳೂ ತಿಂದವು..... ನನ್ನ ಕಣ್ಣುಗಳು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿದ್ದವು..... ಅದಕ್ಕೆ ರುಚಿ ಸಿಕ್ಕಿತ್ತು ಎನಿಸತ್ತೆ..... ಇನ್ನೂ ಬೊಗಳಿತು.... 

   ನಾನು ಬಾಕ್ಸ್ ನಲ್ಲಿದ್ದಾ ಎಲ್ಲಾ ತುಂಡುಗಳನ್ನೂ ಎಸೆದೆ..... ಮುಗಿಬಿದ್ದು ತಿಂದವು.... ಆರಂಭದಲ್ಲಿ ತಿನ್ನುವಾಗಿನ ಹುರುಪು ಇರಲಿಲ್ಲ ಈಗ..... ನನ್ನ ಕಣ್ಣುಗಳಲ್ಲಿ ಕ್ರೌರ್ಯ ತುಂಬಿತ್ತು...... ಕೆಂಪು ಬೆಲ್ಟ್ ನಾಯಿ ನೆಲದ ಮೇಲೆ ಬಿತ್ತು..... ಕೂಡಲೇ ಎಲ್ಲಾ ನಾಯಿಗಳು ವಿಚಿತ್ರವಾಗಿ ಕೂಗುತ್ತಾ ಬಿದ್ದವು.... ನನಗೆ ಗೊತ್ತಿತ್ತು..... ಇನ್ನು ಕೇವಲ ನಿಮಿಷಗಳಷ್ಟೇ ಇವುಗಳ ಆಯುಷ್ಯ ಎಂದು..... ನನ್ನ ಕಣ್ಣು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿತ್ತು..... ಕೆಳಕ್ಕೆ ಬಿದ್ದ ನಾಯಿಯ ಬಾಯಿಯಿಂದ ನೊರೆ ಬರಲು ಶುರು ಆಯಿತು..... ನನ್ನ ಮುಷ್ಟಿ ಬಿಗಿಯಿತು.....
 ನಾಯಿ ಕಾಲುಗಳನ್ನು ಬಡಿಯಲು ಶುರು ಮಾಡಿತು......
ಅಂದು.....ಅವಳೂ ತನ್ನ ಕೈ ಕಾಲು ಬಡಿಯುತ್ತಿದ್ದಳು....
ಇಂದು.....ಈ ನಾಯಿಯ ಕಣ್ಣು ನನ್ನನ್ನೇ ನೋಡುತ್ತಿದ್ದವು..
ಅಂದು.....ಅವಳ ಕಣ್ಣು ನನ್ನನ್ನೇ ನೋಡುತ್ತಿದ್ದವು..ಸಹಾಯಕ್ಕಾಗಿ...
ನಾನು ಕಣ್ಣು ಮುಚ್ಚಿದೆ.......

     ಒಂದನೇ ತರಗತಿ ಓದುವ ಮೊಮ್ಮಗಳನ್ನು ಶಾಲೆಯಿಂದ ಕರೆದುತರುವುದೇ ನನ್ನ ನಿವ್ರತ್ತಿ ಜೀವನದ ಪ್ರಮುಖ ಕೆಲಸವಾಗಿತ್ತು.... ಅದನ್ನು ನಾನು ತುಂಬಾ ಪ್ರೀತಿಯಿಂದ ಮಾಡುತ್ತಿದ್ದೆ..... ಮೊಮ್ಮಗಳ ಶಾಲೆ ಬಿಡುವ ಒಂದು ತಾಸು ಮೊದಲೇ ನಾನು ಗೇಟಿನ ಬಳಿ ಕಾಯುತ್ತಿದ್ದೆ..... ಅವಳಿಗಾಗಿ ಚೊಕೊಲೇಟ್ ಹಿಡಿದಿರುತ್ತಿದ್ದೆ..... ಶಾಲೆ ಬಿಟ್ಟವಳೇ ಓಡಿ ಬಂದು ಚಾಕೊಲೇಟ್ ಹುಡುಕುತ್ತಿದ್ದಳು..... ಸೈಕಲ್ ಮೇಲೆ ಕುಳಿತು ಹೊರಟೆವು ಎಂದರೆ ಅವಳಿಗೆ ಆನೆಯ ಮೇಲೆ ಸವಾರಿ ಮಾಡಿದ ಹಾಗೆ...... 
    ಅವಳಿಗೆ ನಾಯಿ ಎಂದರೆ ತುಂಬಾ ಪ್ರೀತಿ..... ಅದಕ್ಕಾಗಿಯೇ ಅಮ್ಮನಿಂದ ಹಣ ಪಡೆಯುತ್ತಿದ್ದಳು..... ಅದರಿಂದ ಬಿಸ್ಕಿಟ್ ತೆಗೆದುಕೊಂಡು ದಾರಿಯಲ್ಲಿ ಸಿಕ್ಕ ನಾಯಿಗಳಿಗೆ ತಿನ್ನಿಸುವುದು ಅವಳ ಇಷ್ಟದ ಕೆಲಸವಾಗಿತ್ತು..... ಅದರಲ್ಲೂ ಅವಳ ಶಾಲೆಯ ತಿರುವಿನಲ್ಲಿ ಸಿಗುವ ಕೆಂಪು ಬೆಲ್ಟ್ ನಾಯಿ ಕಂಡರೆ,ಅದಕ್ಕೆ ಎರಡು ಬಿಸ್ಕೆಟ್ ಹೆಚ್ಚು..... ಅವಳ ಈ ಖುಶಿ ನೋಡಿ ನನಗೂ ಸಂತೋಷವಾಗುತ್ತಿತ್ತು....

    ಸರಿಯಾಗಿ ವರ್ಷದ ಹಿಂದೆ..... ಅವಳ ಶಾಲೆ ಮುಗಿದು ಕರೆದುಕೊಂಡು ಬರುತ್ತಿದ್ದೆ..... ಅವಳಿಗೆ ಇಷ್ಟವಾದ ಬಿಳಿಯ ಡ್ರೆಸ್ ಹಾಕಿದ್ದಳು..... ಅಂದು ಮೂರು ಬಿಸ್ಕೇಟ್ ಪ್ಯಾಕ್ ಬೇಕು ಅಂದಳು..... ತೆಗೆದುಕೊಟ್ಟೆ..... ಎಂದಿನಂತೆ ಎಲ್ಲಾ ನಾಯಿಗಳಿಗೂ ಹಾಕುತ್ತಾ ಬಂದವಳು, ತಿರುವಿನಲ್ಲಿದ್ದ ಕೆಂಪು ಬೆಲ್ಟ್ ನಾಯಿ ನೋಡಿ ಸೈಕಲ್ ನಿಲ್ಲಿಸಲು ಹೇಳಿದಳು..... ಒಂದು ವರ್ಷದಿಂದ ನೋಡುತ್ತಾ ಬಂದಿದ್ದರಿಂದ ನನಗೂ ಆ ನಾಯಿ ಪರಿಚಿತವಾಗಿತ್ತು..... ಮೊಮ್ಮಗಳು ಒಂದು ಬಿಸ್ಕೇಟ್ ಪ್ಯಾಕ್ ತೆಗೆದುಕೊಂಡು ಇಳಿದಳು..... ಕೆಂಪು ಬೆಲ್ಟ್ ನಾಯಿ ಇವಳ ಹತ್ತಿರ ಬಂತು..... ಇವಳಂತೂ ಖುಶಿಯಿಂದ ಒಂದೊಂದೇ ಬಿಸ್ಕೀಟ್ ಹಾಕುತ್ತಿದ್ದಳು....

      ನಾನು ಸ್ವಲ್ಪವೇ ದೂರದಲ್ಲಿದ್ದೆ..... ಸುಮಾರು ನಾಲ್ಕೈದು ಬಿಸ್ಕೇಟ್ ತಿಂದ ನಾಯಿ ಇನ್ನೂ ಬೊಗಳಲು ಶುರು ಮಾಡಿತು.... ಪಕ್ಕದಲ್ಲೇ ಕಸದ ತೊಟ್ಟಿಯಲ್ಲಿ ಚಿಂದಿ ತಿನ್ನುತ್ತಿದ್ದ ನಾಯಿಗಳೂ ಬಂದವು...... ಮೊಮ್ಮಗಳು ಖುಶಿಯಿಂದ ಅವಕ್ಕೂ ಬಿಸ್ಕೇಟ್ ಹಾಕಿದಳು..... ಎನೆನ್ನಿಸಿತೋ ಕೆಂಪು ಬೆಲ್ಟ್ ನಾಯಿಗೆ.... ಸೀದಾ ಮೊಮ್ಮಗಳ ಕೈಯಿಗೆ ಬಾಯಿ ಹಾಕಿತು...... ಅವಳು ಕೂಗಿ ಬಿಟ್ಟಳು..... ನಾನು ಓಡಿದೆ..... ಆ ನಾಯಿ ಕೈ ಬಿಡಲೇ ಇಲ್ಲ..... ಅದರ ಜೊತೆಗಿದ್ದ ನಾಯಿಗಳೂ ಮೊಮ್ಮಗಳ ಕಾಲು ಕಚ್ಚಿಯೇ ಬಿಟ್ಟವು..... ನಾನು ಕೋಲು ಹುಡುಕುತ್ತಿದ್ದೆ..... ಸಿಗಲಿಲ್ಲ..... ಅವುಗಳ ಹತ್ತಿರ ಹೋದೆ..... 

    ಇನ್ನೂ ನಾಲ್ಕಾರು ನಾಯಿ ಓಡಿ ಬಂದವು..... ನನ್ನನ್ನು ನನ್ನ ಮೊಮ್ಮಗಳ ಬಳಿ ಹೋಗದಂತೆ ಅಡ್ದಗಟ್ಟಿದವು.... ನನ್ನನ್ನೂ ಕಚ್ಚಿದವು..... ಆ ಕೆಂಪು ಬೆಲ್ಟ್ ನಾಯಿ ನನ್ನ ಮೊಮ್ಮಗಳ ಹೊಟ್ಟೆಗೆ ಕಚ್ಚಿತ್ತು..... ಅವಳ ಕೂಗು ಕೇಳಿ ಅಕ್ಕ ಪಕ್ಕದವರೂ ಬಂದರು. ಇನ್ನೂ ಸಿಟ್ಟಿಗೆದ್ದ ನಾಯಿ ಅವಳನ್ನ ಎಳೆದಾಡಿತು..... ಅವಳ ಕಣ್ಣು ನನ್ನನ್ನೇ ನೋಡುತ್ತಿತ್ತು.... ಸಹಾಯಕ್ಕಾಗಿ ಕೂಗುತ್ತಿತ್ತು... ನಾನು ಅಸಹಾಯಕನಾಗಿದ್ದೆ........ ಶಾಕ್ ಗೆ ಒಳಗಾಗಿದ್ದೆ..... ಆ ನಾಯಿ ನನ್ನ ಮೊಮ್ಮಗಳನ್ನು ಬಿಟ್ಟಾಗ ಅವಳು ತೊಟ್ಟಿದ್ದ ಬಿಳಿ ಬಣ್ಣದ ಡ್ರೆಸ್ ಕೆಂಪಾಗಿತ್ತು....... ಎಲ್ಲರೂ ಸೇರಿ ನಾಯಿಯಿಂದ ಬಿಡಿಸುವ ಹೊತ್ತಿಗೆ ನನ್ನ ಮೊಮ್ಮಗಳ ಜೀವ ಹೊರಟು ಹೋಗಿತ್ತು..... ಅವಳ ಕಣ್ಣು ತೆರೆದೇ ಇತ್ತು....... ನನ್ನನ್ನೇ ನೋಡುತ್ತಿತ್ತು...... 

ಇವತ್ತೂ...... ಈ ನಾಯಿಯ ಕಣ್ಣು ನನ್ನನ್ನೇ ನೋಡುತ್ತಿದೆ... ಸಹಾಯಕ್ಕಾಗಿಯಂತೂ ಅಲ್ಲ ...... ಈಗ ನಾಯಿ ನಿಸ್ಚಲವಾಗಿತ್ತು........ ಅದರ ಸುತ್ತಲೂ ಹತ್ತಕ್ಕೂ ಹೆಚ್ಚಿಗೆ ನಾಯಿ ಸತ್ತಿತ್ತು..... ನನ್ನ ಕಣ್ಣಲ್ಲಿ ನೀರು ಹರಿಯುತ್ತಿತ್ತು..... ಮೊಮ್ಮಗಳು ನೆನಪಾಗುತ್ತಿದ್ದಳು...... ಅವಳು ಸತ್ತು ಸರಿಯಾಗಿ ವರ್ಷಕ್ಕೆ ಈ ನಾಯಿಯನ್ನು ಕೊಂದಿದ್ದೆ ನಾನು...... ನಾಳೆ ನಡೆಯುವ ಅವಳ ವರ್ಷದ ಪೂಜೆಗೆ ಸರಿಯಾದ ಅರ್ಪಣೆ ನೀಡಿದೆ ಎನ್ನುವ ಭಾವ ನನಗೆ ಬಂದಿತ್ತು..... ಕೈಗೆ ಸಿಕ್ಕ ದೊಡ್ಡ ಕಲ್ಲಿನಿಂದ ಆ ಕೆಂಪು ಬೆಲ್ಟ್ ನಾಯಿಯ ಮೇಲೆ ಎಸೆದೆ..... ಮಿಸುಕಾಡಲಿಲ್ಲ ಅದು.... ಮನಸ್ಸು ಶಾಂತವಾಗಿತ್ತು..... ಮನೆ ಕಡೆ ಸೈಕಲ್ ತುಳಿದೆ......

    ನೆಮ್ಮದಿಯ ನಿದ್ದೆ ಬಂದಿತ್ತು..... ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿದೆ..... ದೇವರಿಗೆ ಮತ್ತು ಪಕ್ಕದಲ್ಲೇ ಇದ್ದ ಮೊಮ್ಮಗಳ ಫೋಟೊಗೆ ಕೈ ಮುಗಿದೆ..... ಅವಳ ಮುಖ ಶಾಂತವಾಗಿತ್ತು..... ಆಗ ಮಗ ನನ್ನ ಹತ್ತಿರ ಬಂದು ನಿಂತ "ರಾತ್ರಿ ಎಲ್ಲಿಗೆ ಹೋಗಿದ್ರೀ ಅಪ್ಪಾ..? .. ಈಗ ಬಂದ ಮುನಿಯಮ್ಮ ಹೇಳಿದ್ರು ನೀವು ಆ ನಾಯಿಗಳಿಗೆ ಕೋಳಿ ಸಾರು ಮಾಡಿಸಿಕೊಂಡು ಹೋದ ವಿಷ್ಯ..... ನಿಮ್ಮ ಬಗ್ಗೆ ನನಗೆ ನಾಚಿಕೆಯಾಗತ್ತೆ ಅಪ್ಪಾ.. ನಿಮ್ಮದೇ ಮೊಮ್ಮಗಳನ್ನು ಕೊಂದ ನಾಯಿಗಳಿಗೆ ಸತ್ಕಾರ ಮಾಡಲು ಹೋಗಿದ್ರಲ್ಲಾ ಅಪ್ಪಾ...? ಏನೆನ್ನಲೀ ನಿಮ್ಮ ಮನಸ್ಸಿಗೆ...?" ಇನ್ನೂ ಹೇಳುವವನಿದ್ದ....   ಆಗಲೇ ಪಕ್ಕದ ಮನೆಯ ಹುಡುಗ ಓಡುತ್ತಾ ಬಂದ .. ಆತ ನನ್ನ ಮೊಮ್ಮಗಳ ಕ್ಲಾಸ್ ಮೇಟ್, " ಅಜ್ಜಾ , ನಮ್ಮ ಶ್ವೇತಾಳನ್ನು ಕಚ್ಚಿದ ನಾಯಿ ಸತ್ತು ಹೋಗಿದೆಯಂತೆ..... ನನ್ನ ಅಂಕಲ್ ಹೇಳ್ತಾ ಇದ್ರು"ಎಂದ...... ನನ್ನ ಮಗ ನನ್ನನ್ನೇ ನೋಡುತ್ತಿದ್ದ..... ಸೊಸೆ ಓಡಿ ಬಂದಳು.   

  ಆಷ್ಟರಲ್ಲೇ ಹೊರಗಡೆ ಕಾರು ಬಂದ ಸದ್ದಾಯಿತು..... ಡ್ರೈವರ್ ಒಳಕ್ಕೆ ಬರುತ್ತಾ " ಸರ್, ಕಾರ್ ಬಂದಿದೆ ನಿಮ್ಮನ್ನು ಸನ್ಮಾನಕ್ಕೆ ಕರೆದೊಯ್ಯಲು..... ಅಂದಹಾಗೆ ನೀವು ವರ್ಷ ಪೂರ್ತಿ ಯಾವ ನಾಯಿಯನ್ನು ಪಾಲಿಕೆಯವರು ಕೊಲ್ಲಬಾರದು ಎಂದು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದೀರೋ, ಅದಕ್ಕಾಗಿಯೇ ನಿಮಗೆ ಪ್ರಾಣಿ ದಯಾ ಸಂಘದ ವತಿಯಿಂದ ಇವತ್ತು ಸನ್ಮಾನ ನಡೆಯಲಿಕ್ಕಿದೆಯೋ ಅದೇ ನಾಯಿಯನ್ನು ಯಾರೋ ಸಾಯಿಸಿದ್ದಾರೆ ಸಾರ್...... ಚಿಕನ್ ಗೆ ವಿಷ ಸೇರಿಸಿ ಹಾಕಿದ್ದಾರೆ ಸಾರ್..... ಸುಮಾರು ಇಪ್ಪತ್ತು ನಾಯಿ ಸತ್ತಿದೆ..... ಅದಿರಲಿ ಸಾರ್, ನಾವು ಹೊರಡೋಣ.... ಲೇಟ್ ಆಗತ್ತೆ ಸರ್" ಎಂದ.......