Jul 22, 2010

ಮುಂಗಾರಿನ ನೆನಪು......!

ಮನದ ಮುಗಿಲು ಮೋಡ ಕಟ್ಟಿ,
ಗರಿಯ ಬಿಚ್ಚಿ ನೆಗೆಯುತಿದೆ.....
ತಂಪು ಗಾಳಿ ಎದೆಯ ಸೋಕಿ,
ತುಂತುರು ಮಳೆ ಸುರಿದಿದೆ......

ಎಲ್ಲಿಂದಲೋ ಬಂದ ಸುಳಿಯಗಾಳಿ,
ಕಹಿಯ ನೆನಪ ಕೆದಕಿದೆ.....
ಮಳೆಯ ಹನಿಯು ಭುವಿಯ ಸೇರಿ,
ಒಣಗಿದ ಗಾಯವ ನೆನೆಸಿದೆ.....

ಮಣ್ಣ ಮಧುರ ಪರಿಮಳ,
ಮನದ ಮೂಲೆ ತಲುಪಿದೆ,
ಮಂಜಿನ ಮಳೆಯ ಸಿಂಚನ,
ನೋವನೆಲ್ಲಾ ಮರೆಸಿದೆ.....

ನೆನೆದು ಹೋದ ನೆಲದ ಹಾಗೆ,
ನಿನ್ನ ನೆನಪ ನೆನೆಸಿದೆ.....
ಸುರಿದು ಹೋದ ಮಳೆಯು ,
ನೆನಪ ಹಸಿರು ಮಾಡಿದೆ....

Jul 5, 2010

' ಪೀಕಲಾಟವಯ್ಯಾ.........'

'' ಸರ್, ಒಳಗೆ ಬರಲಾ'' ಎಂದೆ..... ಒಳಗಡೆ ಒಬ್ಬರು 55  - 60 ವರ್ಷದ ಮನುಷ್ಯ ಕುಳಿತಿದ್ದರು...... ನಾನು  ಇತ್ತೀಚಿಗಷ್ಟೇ ಹೊಸ ಕೆಲಸಕ್ಕೆ  ಸೇರಿದ್ದೇನೆ.... ನಮ್ಮದು ಕುಂದಾಪುರದಿಂದ ಕೇರಳ ತನಕ ಇರುವ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡುವ ಕೆಲಸ...... ಹೀಗಾಗಿ ಕೆಲಸದ ಆರಂಭಕ್ಕೂ ಮೊದಲು, ಇರುವ ಮರಗಳ ಕಡಿದು ಹೊಸ ಮರ ನೆಡುವ ಕೆಲಸ, ಈಗಿರುವ ವಿದ್ಯುತ್ ಕಂಬಗಳ ಕಿತ್ತು ರಸ್ತೆಗಳ ದೂರಕ್ಕೆ ಹಾಕುವ ಕೆಲಸವನ್ನ  ಮಾಡಬೇಕಿತ್ತು...... ಆ ದಿನ ನಾನು ಅರಣ್ಯ ಇಲಾಖೆಗೆ ಹೋಗಿದ್ದೆ, ಎಲ್ಲಿಯದು, ಯಾರು ಎನ್ನುವದನ್ನು ಬರೆಯಲ್ಲ....ಅದು ಬೇಡದ ವಿಷಯ..... '' ಬನ್ನಿ, ಬನ್ನಿ '' ಎಂದರು ಆ ವ್ಯಕ್ತಿ.... ನಾನು ಕುಳಿತುಕೊಂಡೆ, ಏನೂ ಕೆಲಸವಿರದಿದ್ದರೂ ಕೆಲಸ ಮಾಡುತ್ತಿರುವ ಹಾಗೆ ನಟಿಸಿದರು..... ನಾನು ಸುಮ್ಮನಿದ್ದೆ....... '' ಹೇಳಿ ಏನು ವಿಷಯ '' ಎಂದರು ತಲೆ ಎತ್ತದೆ...... '' ಸರ್, ನಾನು ಕುಂದಾಪುರದಿಂದ ತಲಪಾಡಿ ತನಕ  four laning ಮಾಡುವ ಕಂಪನಿಯಿಂದ ಬಂದಿದ್ದೇನೆ.... ನಮಗೆ ರಸ್ತೆ ಬದಿ ಇರುವ ಮರಗಳ ಕಡಿಯಲು ಅನುಮತಿ ಪಡೆಯುವ ಬಗ್ಗೆ ಮಾತನಾಡಲು ಬಂದಿದ್ದೇನೆ '' ಎಂದೆ....... ವ್ಯಕ್ತಿ, ನನ್ನನ್ನೊಮ್ಮೆ ನೋಡಿ ಮತ್ತೆ ಕೆಲಸ ಮಾಡುವ ನಾಟಕ ಮುಂದುವರಿಸಿತು....... '' ಮರಗಳನ್ನು ಕಡಿಯದೇ, ರಸ್ತೆ ಮಾಡಲು ನಿಮಗೆ ಬರುವುದಿಲ್ಲವಾ, ಪಾಪದ ಮರಗಳನ್ನು ಕಡಿದು ಏನು ಮಹಾ  ಸಾಧಿಸುತ್ತೀರಿ ? .... ದಿನಾ ದಿನಾ ಮರ ಕಡಿದು ಭೂಮಿ ಬರಿದು ಮಾಡುತ್ತೀರಿ  '' ಎಂದರು..... ''ಸರ್, ಈಗ ಇರುವ ಮರಗಳು, ರಾಷ್ಟೀಯ ಹೆದ್ದಾರಿ ಜಾಗದಲ್ಲಿವೆ......ರಸ್ತೆ ಅಗಲ ಮಾಡುವ ಸಮಯಲ್ಲಿ ಈ ಮರಗಳನ್ನು ಕಡಿಯುವ ಶರತ್ತಿನ ಮೇಲೆಯೇ ನಿಮಗೆ ಅಲ್ಲಿ ಮರ ನೆಡುವ ಅನುಮತಿ ನೀಡಲಾಗಿತ್ತು ಅಲ್ಲವೇ'' ಎಂದೆ..... ''ಅದು ಸರಿ, ಆದರೆ ಈಗ ಮರ ಕಡಿದರೆ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುತ್ತದಲ್ಲ ?'' ಎಂದರು... ನಾನು ಬಿಡಬೇಕಲ್ಲಾ, '' ಒಂದು ಮರ ಕಡಿದರೆ, ಎರಡು ಗಿಡ ಬೆಳೆಸುವ ಹಣ ನಿಮಗೆ ಸಂದಾಯ ಮಾಡುತ್ತೇವೆ, ಅದರ ಉಸ್ತುವಾರಿಯೂ ಸಹ ರಾಷ್ಟೀಯ ಹೆದ್ದಾರಿ ತೆಗೆದುಕೊಳ್ಳುತ್ತಿದೆ...... ಈಗ ಕಡಿಯುವ ಮರದ ಸಂಪೂರ್ಣ ವೆಚ್ಚ ಮತ್ತು ಅದರ ಹಣವನ್ನೂ ಈಗಾಗಲೇ ರಾಷ್ಟೀಯ ಹೆದ್ದಾರಿ ಭರಿಸಿದೆ.... ಅದರ ಹಣ ಒಂದು ತಿಂಗಳ ಮೊದಲೇ ಅರಣ್ಯ ಇಲಾಖೆಗೆ ಜಮಾ ಮಾಡಿದೆ '' ಎಂದೆ.......

  ''ಸರಿ, ನೀವು ರಾಷ್ಟೀಯ ಹೆದ್ದಾರಿ  ಕಡೆಯಿಂದ ಬಂದಿದ್ದೀರೋ ಅಥವಾ ಕಂಪನಿ ಕಡೆಯಿಂದ ಬಂದಿದ್ದೀರೋ'' ಎಂದರು..... ನಾನು'' ಕಂಪನಿ ಕಡೆಯಿಂದ'' ಎಂದೆ..... '' ಸರಿ, ನಮ್ಮ ಆಫೀಸಿನಲ್ಲಿ, ತಿಂಗಳ ಖರ್ಚು ಅಂತ ಇರತ್ತೆ, ಅದರ ಖರ್ಚಿಗೆಲ್ಲಾ ಸರಕಾರ ಹಣ ಮಂಜೂರು ಮಾಡಲ್ಲ.... ನಿಮ್ಮ ಕಂಪನಿಯಿಂದ ಹತ್ತು ಸಾವಿರ ರುಪಾಯಿ ಕೊಡಿ, ನಾನು ಇವತ್ತೇ order issue ಮಾಡ್ತೇನೆ''  ಎಂದರು.... ನನಗೆ ಉರಿದು ಹೋಯಿತು....... ಇಷ್ಟು ಹೊತ್ತು ಪರಿಸರ, ಅರಣ್ಯ ನಾಶ ಅಂತ ಮಾತಾಡಿದ ವ್ಯಕ್ತಿ ಇವರೇನಾ ಅಂತ ಅನುಮಾನ ಬಂತು...... '' ಸರ್, ಇದೂ ಸಹ ಸರಕಾರೀ ಕೆಲಸವೇ, ನಾವು ಮಾಡೋದು ನಮ್ಮ ಮನೆ ರಸ್ತೆಯಲ್ಲ.... ರಾಷ್ಟೀಯ ಹೆದ್ದಾರಿ...... ಅದಕ್ಕೆ ಸರಕಾರವೇ ಹಣ ಕೊಡುತ್ತಿದೆ..... ನಿಮ್ಮ ಇಲಾಖೆಗೆ ಸೇರಬೇಕಾದ ಹಣ ಈಗಾಗಲೇ ನಿಮ್ಮ ಇಲಾಖೆಗೆ ಜಮಾ ಆಗಿದೆ, ಈಗ ನೀವು ಹಣ ಯಾಕಾಗಿ ಕೇಳ್ತಾ ಇದೀರಾ ಅಂತ ಅರ್ಥ ಆಗ್ಲಿಲ್ಲ ಸರ್'' ಎಂದೆ ಸಾವದಾನವಾಗಿ...... '' ಸರಿ ಹಾಗಾದರೆ, ನೀವು ಒಂದು ವಾರ ಬಿಟ್ಟು  ಬನ್ನಿ..... ನಾನು ಎಲ್ಲ ರೆಕಾರ್ಡ್ ಪರಿಶೀಲಿಸಿ ನಿಮಗೆ ಪತ್ರ  ಬರೆಯುತ್ತೇನೆ'' ಎಂದರು.......   ತುಂಬಾ ಸಿಟ್ಟು ಬಂತು.... ಏನೂ ಮಾಡುವ ಹಾಗಿರಲಿಲ್ಲ..... ನನ್ನ  ಸ್ವಂತ ಕೆಲಸವಾಗಿದ್ದರೆ, ನನ್ನ ಮೂಗಿನ ನೇರಕ್ಕೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು..... ಆದರೆ, ನಾನು ಒಂದು ಕಂಪನಿಯಲ್ಲಿ ದುಡಿಯುತ್ತಿರುವ  ಒಬ್ಬ ನೌಕರ.... ಹಾಗಾಗಿ ದುಡುಕದೆ ಸುಮ್ಮನೆ ಕುಳಿತೆ, '' ಸರ್, ನಮ್ಮ ಬಾಸ್ ಗೆ ಫೋನ್ ಮಾಡಿ ಬರುತ್ತೇನೆ '' ಎಂದು ಹೊರಗಡೆ ಬಂದೆ.....

   ಬಾಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.......'' ಅಷ್ಟೆಲ್ಲ ಹಣ ಕೊಡಬೇಡ..... ನಮಗೂ ಕೆಲಸ ಮುಖ್ಯ , ಈ ಕೆಲಸ ತಡವಾದರೆ ನಮ್ಮ ಉಳಿದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ..... ಎಷ್ಟು ಕಡಿಮೆಯಲ್ಲಿ ಆಗುತ್ತದೋ, ಅಷ್ಟರಲ್ಲಿ ಮುಗಿಸಿ ಬಾ'' ಎಂದರು...... ನನ್ನಲ್ಲಿ ಹಣ ಇತ್ತು..... ಆದರೆ ಸ್ವಲ್ಪ ಸತಾಯಿಸೋಣ ಎನಿಸಿದೆ...... ಒಳಗೆ ಹೋದೆ...... '' ಸರ್, ನಮ್ಮ ಬಾಸ್ ಹತ್ತಿರ ಮಾತನಾಡಲು ಆಗಲಿಲ್ಲ.... ಅವರು ಈಗ ಇಲ್ಲಿಲ್ಲ'' ಅಂದೆ...... '' ಸರಿ, ಏನು ಮಾಡ್ತೀಯಾ ಈಗ '' ಎಂದರು....... '' ನನ್ನ ಹತ್ತಿರ ಈಗ ಎರಡು ಸಾವಿರ ಇದೆ, ನಿಮ್ಮ ಆಫೀಸಿನ ಖರ್ಚಿಗೆ ಇದನ್ನು ಕೊಡುತ್ತೇನೆ.... ನನ್ನ ಬಾಸ್ ಹತ್ತಿರ ಮಾತನಾಡಿ ಮತ್ತೆ ಹಣ ಕೊಡುತ್ತೇನೆ '' ಎಂದೆ..... '' ಏನ್ರಿ, ಇಷ್ಟು ದೊಡ್ಡ ಆಫೀಸಿಗೆ ಬಂದು ಎರಡು ಸಾವಿರದ ಮಾತಾಡ್ತೀರಾ'' ಎಂದರು ದೊಡ್ಡ ಕಣ್ಣು ಮಾಡಿ..... '' ಸರ್, ನನ್ನ ಹತ್ತಿರ ಇರುವುದು ಇಷ್ಟೇ  ಹಣ '' ಎಂದೆ ಮುಖ ಸಣ್ಣ ಮಾಡಿಕೊಂಡು......  '' ಛೆ ಛೆ, ಯಾಕಾದ್ರೂ ಬರ್ತೀರೋ ಇಂಥ ಆಫೀಸಿಗೆ ಹಣ ಇಲ್ಲದೆ, ಆಯ್ತು ಈಗ ಕೊಡಿ ಅದನ್ನ .... ನಂತರ  ಉಳಿದ ಹಣ ತೆಗೆದುಕೊಂಡು ಬನ್ನಿ '' ಎಂದರು..... '' ಎಲ್ಲಿ ಸರ್, ನಿಮ್ಮ ಆಫೀಸಿನ ಖರ್ಚಿಗೆ ಅಂತ ಇಟ್ಟ ಡಬ್ಬಿ..... ಅದರಲ್ಲೇ ಹಾಕುತ್ತೇನೆ ಹಣ  '' ಎಂದೆ....... ಅವರು ನನ್ನ ಮುಖ ನೋಡಿದ ರೀತಿ ನೋಡಬೇಕಿತ್ತು...... '' ಕೇಳಿ ಸರ್, ನಮ್ಮ ಇಲಾಖೆಯಿಂದ ನಡೆಯುವ ಸಭೆ, ಇಲಾಖೆಯ ಮಂತ್ರಿ, ಅವರ ಮಗ, ಹೆಂಡತಿ ಯಾರೇ ಬಂದರೂ ಅವರ ಖರ್ಚು ನಾನೇ ನೋಡಿಕೊಳ್ಳಬೇಕು..... ಅವರಿಗೆ ದೇವಸ್ತಾನಕ್ಕೆ ಕರೆದುಕೊಂಡು ಹೋಗಲು ಗಾಡಿ, ಅವರ ಇತರೆ ಖರ್ಚನ್ನೂ ನಾನೇ ನೋಡಿಕೊಳ್ಳಬೇಕು.... ಇದಕ್ಕೆ ಸರಕಾರ ಹಣ ಕೊಡಲ್ಲ...... ನಾನು ಇದನ್ನೆಲ್ಲಾ ಮಾಡದೆ ಇದ್ದರೆ, ನನ್ನ ವರ್ಗಾವಣೆ ಆಗತ್ತೆ.....
ಮಕ್ಕಳನ್ನು ಇಲ್ಲೇ ಶಾಲೆಗೇ ಹಾಕಿದ್ದೇನೆ.... ಎಲ್ಲಾ ಬಿಟ್ಟು ಹೋಗಲು ಆಗತ್ತಾ....... ಹಾಗಾಗಿ, ನಿಮ್ಮಿಂದ ಇದನ್ನೆಲ್ಲಾ ನಿರೀಕ್ಷೆ  ಮಾಡುತ್ತೇವೆ'' ಎಂದರು ಅಸಹಾಯಕರಾಗಿ.....

ನಾನು ಏನೂ ಮಾತಾಡಲಿಲ್ಲ..... ಇದಕ್ಕೆ, ಲಂಚ ಎನ್ನಲೋ... ಸಹಾಯ ಎನ್ನಲೋ ತಿಳಿಯಲಿಲ್ಲ..... ಏನನ್ನಾದರೂ ಕೊಟ್ಟು ನನ್ನ ಕೆಲಸ ಮುಗಿಸಿ ಹೊರಡಬೇಕಿತ್ತು.... ಕಿಸೆಯಲ್ಲಿದ್ದ ಕವರನ್ನು ತೆಗೆದು ಕೊಟ್ಟೆ..... ಸಾಹೇಬರು ಅದನ್ನ ಎಣಿಸಿ ಅವರ ಕಿಸೆಗೆ ಹಾಕಿಕೊಂಡರು...... ''ಸರಿ, ನಾಳೆ ಬಂದು ನಿಮ್ಮ ಲೆಟರ್ ತೆಗೆದುಕೊಂಡಿ ಹೋಗಿ.... '' ಎಂದರು..... ನಾನು ಹೊರಡಲು ಎದ್ದು ನಿಂತೇ......'' ಹೆಲೋ, ಎಲ್ಲಿ ಹೊರಟಿರಿ, ನಾಳೆ ನೀವು ಬರದೆ ಇದ್ದರೆ.... ನಾನು ನಿಮ್ಮನ್ನು ಹುಡುಕಿಕೊಂಡು ಬರಲಾ, ನಿಮ್ಮ ಬಾಸ್ ನಂಬರ್  ಕೊಡಿ , ನೀವು ಬರದೆ ಇದ್ದರೂ ಅವರಿಂದ ಪಡೆಯುತ್ತೇನೆ  '' ಎಂದರು.......   ನನಗೆ ಏನು ಮಾಡೋದು ಅಂತ ತಿಳಿಯಲಿಲ್ಲ..... ಬಾಸ್ ನಂಬರ್ ಕೊಟ್ಟರೆ ಸರಿ ಆಗಲ್ಲ... ಕೊಡದೆ ಇದ್ದರೆ ಈತ ಬಿಡಲ್ಲ.....  '' ಓಹೋ ಅದಕ್ಕೇನಂತೆ ಸರ್, ಬರೆದುಕೊಳ್ಳಿ..... 99614 .......... ''ಎಂದು ನಮ್ಮ ಬಾಸ್ ರ ನಿಜವಾದ ನಂಬರಿನ ಎರಡು ಅಂಕೆಗಳನ್ನು ಆಚಿಚೆ ಮಾಡಿ ಹೇಳಿದೆ ..... '' ಇರಿ  ಒಂದ್ನಿಮಿಷ, ನಿಮ್ಮೆದುರೆ ಮಾತನಾಡಿಸುತ್ತೇನೆ'' ಎಂದರು..... ಇದನ್ನು ನಾನು expect ಮಾಡಿರಲಿಲ್ಲ..... 'ಸುಮ್ಮನೆ ಒಂದು ನಂಬರ್ ಕೊಟ್ಟು ಬಂದರೆ ಆಯ್ತು.....  ಹಣ ಕೇಳಲು ಯಾರೂ ಆಫೀಸಿನಿಂದ ಫೋನ್ ಮಾಡಲ್ಲ..... ಸಂಜೆಯೊಳಗೆ ನನಗೆ ಬೇಕಾದ ಲೆಟರ್ ಟೈಪ್ ಆಗಿರತ್ತೆ.... ಇವರು  ಸಂಜೆ ಮನೆಗೆ ಹೋಗಿ ತಪ್ಪಾಗಿ ಕೊಟ್ಟ  ಬಾಸ್ ನಂಬರಿಗೆ  ಟ್ರೈ ಮಾಡ್ತಾ ಇರಲಿ' ಎಣಿಸಿ ತಪ್ಪು  ನಂಬರ್ ಕೊಟ್ಟಿದ್ದೆ.... ಪುಣ್ಯಾತ್ಮ, ಫೋನ್ ಮಾಡೇ ಬಿಡೋದಾ......

'' ಹೆಲೋ, ಇದು four laning ಮಾಡೋ ಕಂಪನಿಯ ಬಾಸಾ ? '' ನನಗೆ ನಗು ಬರುತ್ತಾ ಇತ್ತು...... ನಕ್ಕರೆ..... ನನ್ನ ಬಂದ ಕೆಲಸ ಕೆಡುತ್ತಿತ್ತು....ಸುಮ್ಮನಿದ್ದೆ..... ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತಮಗೆ ಬೇಕಾದವನಲ್ಲ ಎಂದು ಗೊತ್ತಾಗಿತ್ತು ಇವರಿಗೆ.... '' ಏನ್ರೀ, ತಪ್ಪು ನಂಬರ್ ಕೊಡ್ತೀರಾ....? ಹಣ ಕೊಡಲು ಆಗದೆ  ಇದ್ದರೆ ಹೇಳಬೇಕು... ಅದನ್ನ ಬಿಟ್ಟು ಹೀಗೆ  ಮಾಡ್ತೀರಾ .....ನಿಮ್ಮ ಆರ್ಡರ್ ಕೊಡಲ್ಲ ಹೋಗ್ರೀ'' ಎಂದರು ಸಿಟ್ಟಿನಿಂದ.....ನನಗೆ ನಡುಕ ಶುರು ಆಯ್ತು...... ಆದರೂ ಪಾರಾಗಬೇಕಲ್ಲ......'' ಸರ್, ನೀವು ಯಾವ ನಂಬರಿಗೆ ಮಾಡಿದ್ರೀ, ಅವರು ಈಗ ಇಲ್ಲಿಲ್ಲ..... ದೆಹಲಿಯಲ್ಲಿದ್ದಾರೆ....... ಇಲ್ಲಿಯ ನಂಬರ್ ಇಲ್ಲ ಅವರ ಹತ್ತಿರ..... ಅವರ ನಂಬರ್ ಮೊದಲಿಗೆ  ಸೊನ್ನೆ ಸೇರಿಸಿ ಮಾಡಿ ಸರ್... ನಾನು ಫೋನ್ ಮಾಡಿದಾಗ ಅವರ ಫೋನ್ not reachable  ಅಂತ ಬರ್ತಾ ಇತ್ತು  '' ಎಂದೆ..... ಸಮಯಕ್ಕೆ ಸರಿಯಾದ ಸುಳ್ಳನ್ನೇ ಹೇಳಿದ್ದೆ..... ವ್ಯಕ್ತಿ convince ಆದ ಹಾಗೆ ಕಂಡರು  ...... ಅಂತೂ ಬದುಕಿದೆ ಎನಿಸಿತು....... ' ಸರಿ ಸರ್, ನಾನು ಹೊರಡುತ್ತೇನೆ.... ನಾಳೆ ಆರ್ಡರ್ ಅನ್ನು ಕಳಿಸಿಕೊಡಿ... '' ಎಂದು ಹೊರಟೆ.....

ಬಾಗಿಲ ತನಕ ಹೋಗಿದ್ದೆ......  '' ರೀ ನಿಮ್ಮ ನಂಬರೂ ಕೊಡಿ..... ಯಾವುದಕ್ಕೂ ಇರಲಿ'' ಎಂದರು ಬೆನ್ನು ಬಿಡದ ಬೇತಾಳದಂತೆ.... ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ  ಒಳಕ್ಕೆ ಬಂದ.... 'ಅಯ್ಯೋ... ಹೇಗಾದರೂ ಮಾಡಿ ತಪ್ಪಿಸಿಕೊಳ್ಳೋಣ ಎಂದುಕೊಂಡರೆ ಈತ ನನ್ನ ನಂಬರ್  ಕೇಳ್ತಾ ಇದ್ದಾನಲ್ಲ   ' ಎಂದುಕೊಂಡು....... ನನ್ನ ನಂಬರ್ ಹೇಳಿದೆ.... ಆಗಿನ ಹಾಗೆ ಒಂದು ನಂಬರ್ ಆಚಿಚೆ ಮಾಡಿ..... ಅಲ್ಲಿಗೆ ಬಂದ ವ್ಯಕ್ತಿ ಎದುರಿನ ಕುರ್ಚಿ ಮೇಲೆ ಕುಳಿತ...... ನಾನು ಸಹ ಅವನ ಪಕ್ಕದಲ್ಲೇ ನಿಂತಿದ್ದೆ...... ನನ್ನ ನಂಬರ್    ಅವರ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡರು  .... '' ರಿಂಗ್ ಕೊಡ್ತಾ ಇದ್ದೀನಿ ನೋಡಿ, ಇದು ನನ್ನ ನಂಬರ್... ಸೇವ್ ಮಾಡಿಕೊಳ್ಳಿ '' ಎಂದರು....... ' ಅಯ್ಯೋ ಸತ್ತೆ, ಮತ್ತೆ ಸಿಕ್ಕಿ ಹಾಕಿಕೊಂಡೆ' ಎನಿಸಿದೆ...... ಮೊಬೈಲ್ ರಿಂಗ್ ಕೇಳಿಸುತ್ತಾ  ಇತ್ತು... ........ ನನಗೋ ಆಶ್ಚರ್ಯ...... 'ನಂಬರ್ ತಪ್ಪಾಗಿ ಕೊಟ್ಟರೂ ರಿಂಗ್ ಹೇಗೆ ಬಂತು ' ಅಂತ....  '' ಸರಿ, ನೀವು ಹೊರಡಿ '' ಎಂದರು ಅವರು ..... ನಾನು ನನ್ನ ಮೊಬೈಲ್ ಹೊರ ತೆಗೆದೆ .... ನನ್ನ ಮೊಬೈಲ್ ನಲ್ಲಿ ಯಾವುದೇ ಮಿಸ್ ಕಾಲ್ ಬಂದಿರಲಿಲ್ಲ.... ಅದೇ ಸಮಯಕ್ಕೆ ಒಳಗೆ ಬಂದ ವ್ಯಕ್ತಿಯೂ ಸಹ ಅವನ ಕಿಸೆಯಿಂದ ಮೊಬೈಲ್ ಹೊರ ತೆಗೆಯುತ್ತಿದ್ದ....... ಆಗಲೇಗೊತ್ತಾಗಿದ್ದು  ನನಗೆ, ರಿಂಗ್ ಆದ ಮೊಬೈಲ್ ನನ್ನದಲ್ಲ ಎಂದು....